ರಾಯಚೂರು: ಚಾಕು ಇರಿತದಿಂದ ಈಚೆಗೆ ಗಾಯಗೊಂಡಿದ್ದ ಯುವಕ ಮಹೇಶ ಕುಮಾರ ಅಲಿಯಾಸ್ ಗೋವಿಂದ ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಮೃತನ ಕಡೆಯವರು ಆರೋಪಿ ಮನೆಗೆ ನುಗ್ಗಿ ಭಾನುವಾರ ದಾಂಧಲೆ ನಡೆಸಿದ್ದಾರೆ.
ಹಣಕ್ಕೆ ಪೀಡಿಸುತ್ತಿದ್ದ ಆರೋಪಿ ಜಮೀಲ್ ಹಣ ನೀಡದ ಕಾರಣಕ್ಕೆ ಪ್ರಶಾಂತಗೆ ಚಾಕುನಿಂದ ಇರಿದಿದ್ದ. ಬಿಡಿಸಲು ಬಂದ ಪ್ರಶಾಂತನ ಅಣ್ಣ ಗೋವಿಂದನಿಗೂ ಆರೋಪಿ ಇರಿದು ಗಾಯಗೊಳಿಸಿದ್ದ ಘಟನೆ ನಡೆದಿತ್ತು. ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಹೆಚ್ಚಿನ ಚಿಕಿತ್ಸೆಗೆ ಗೋವಿಂದನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಕಿಡ್ನಿ ಮತ್ತು ಲಿವರ್ ಸರ್ಜರಿ ಮಾಡಲಾಗಲ್ಲ ಎಂದು ವೈದ್ಯರು ವಾಪಸ್ ಕಳುಹಿಸಿದ್ದರು. ರಾಯಚೂರು ಹತ್ತಿರ ಬರುವಾಗ ಮಾರ್ಗಮಧ್ಯೆ ಗೋವಿಂದ ಪ್ರಾಣಬಿಟ್ಟಿದ್ದನು.
ಶವಪರೀಕ್ಷೆ ನಡೆಸಿದ ಮೃತದೇಹವನ್ನು ತೆಗೆದುಕೊಂಡು ಹೋಗುವಾಗ ಮೃತನ ಕಡೆಯವರು ಎಲ್ಬಿಎಸ್ ನಗರದಲ್ಲಿ ಆರೋಪಿಯ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಷ್ಟರಲ್ಲಿ ಪೊಲೀಸರು ಬಂದು ಚದುರಿಸಿದ್ದಾರೆ. ಗೋವಿಂದನ ಸಾವಿನ ಸುದ್ದಿ ತಿಳಿದು ಆರೋಪಿಯ ಕಡೆಯವರು ಶನಿವಾರವೇ ಮನೆಯಿಂದ ತೆರಳಿದ್ದಾರೆ.
ಆರೋಪಿಯನ್ನು ಶನಿವಾರವೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮಾರ್ಕೆಟ್ ಯಾರ್ಡ್ ಠಾಣೆ ಪೊಲೀಸರು ತಿಳಿಸಿದ್ದಾರೆ.