ರಾಯಚೂರು: ಜಿಲ್ಲೆಯಲ್ಲಿ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಸ್ಥಾಪನೆ ಮಾಡುವಂತೆ ಮುಖ್ಯಮಂತ್ರಿ ಅವರಿಗೆ ಒತ್ತಾಯ ಮಾಡಬೇಕು ಎಂದು ರಾಯಚೂರು ಏಮ್ಸ್ ಹೋರಾಟ ಸಮಿತಿಯ ಪದಾಧಿಕಾರಿಗಳು ಮಂತ್ರಾಲಯದ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥಸ್ವಾಮಿ ಅವರಿಗೆ ಭಾನುವಾರ ಮನವಿ ಮಾಡಿದರು.
ಸಮಿತಿಯ ಮನವಿ ಆಲಿಸಿದ ಶ್ರೀಗಳು ‘ಆಗಸ್ಟ್ 2ರಂದು ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸುತ್ತೇನೆ ಎಂದರು’ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ.
ರಾಯಚೂರು ಹಿಂದುಳಿದ ಭಾಗವಾಗಿದೆ. ಈಗಾಗಲೇ ಐಐಟಿ ಜಿಲ್ಲೆಯಿಂದ ಕೈತಪ್ಪಿ ಹೋಗಿದೆ. ಏಮ್ಸ್ ಸ್ಥಾಪನೆ ಮಾಡುವ ಮೂಲಕ ಜಿಲ್ಲೆಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಮನವರಿಕೆ ಮಾಡಿಕೊಡಲಾಗುವುದು ಎಂದಿದ್ದಾರೆ.
ವಿಪ್ರ ಸಮಾಜದ ಮುಖಂಡ ನರಸಿಂಗರಾವ್ ದೇಶಪಾಂಡೆ, ಸಮಿತಿಯ ಪ್ರಮುಖರಾದ ಬಸವರಾಜ ಕಳಸ, ಅಶೋಕಕುಮಾರ ಸಿ.ಕೆ.ಜೈನ್, ಶಿವಕುಮಾರ ಯಾದವ್, ವಿನೋದ ರೆಡ್ಡಿ, ವಿರೇಶಹಿರಾ, ಡಿ.ವಿರೇಶ ಕುಮಾರ, ಕರುಣಾಕರರೆಡ್ಡಿ ಇದ್ದರು.