ರಾಯಚೂರು: ಇಸ್ರೋ ಕೇವಲ ಮಂಗಳ-ಚಂದ್ರಯಾನಕ್ಕೆ ಸೀಮಿತವಲ್ಲ. ಮಾನವನ ದೈನಂದಿನ ಬದುಕಿಗೆ ಅತ್ಯವಶ್ಯಕವಾಗಿದೆ ಎಂದು ಇಸ್ರೋ ವಿಜ್ಞಾನಿ ಪ್ರಭಾಕರ ಜೆ.ಭಟ್ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಿಂದ ಸೋಮವಾರ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಸ್ರೋ ನಿರ್ಮಾಣ ಮಾಡಿರುವ ಉಪಗ್ರಹಗಳು ನಿಂತು ಬಿಟ್ಟರೆ, ಮಾನವನ ಬದುಕು ಏರು-ಪೇರಾಗುತ್ತದೆ. ಉಪಗ್ರಹಗಳ ನೆರವಿನಿಂದ ಮಾನವ ನಿಸರ್ಗದ ವಾತವರಣವನ್ನು ಅರಿತುಕೊಳ್ಳುತ್ತಾನೆ. ಉಪಗ್ರಹಗಳು ಸಂಪರ್ಕ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿರಿವುದರಿಂದ ಮಾನವ ಜಾಗತಿಕವಾಗಿ ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಲು ಸಾದ್ಯವಾಗಿದೆ ಎಂದರು.
ಉಪಗ್ರಹಗಳಿಂದ ಸೈನಿಕರಿಗೆ ಸ್ಥಳಗಳನ್ನು, ಗಡಿಗಳನ್ನು ಗುರುತಿಸಲು ಸಾಧ್ಯವಾಗಿದ್ದು, ವಿರೋಧಿಗಳ ಆಕ್ರಮಣ ತಿಳಿಯಲು ಕೂಡ ಮಹತ್ವದ ಪಾತ್ರ ವಹಿಸಿದೆ. ರೈತ ಸಮುದಾಯಕ್ಕೆ ಭೂಮಿಯ ಫಲವತ್ತತೆ ಹಾಗೂ ಮಳೆ ಬೆಳಗಳ ಮಾಹಿತಿ ನೀಡುತ್ತದೆ ಎಂದು ತಿಳಿಸಿದರು.
ಇಸ್ರೋ ಇದುವರೆಗೆ 101 ಉಪಗ್ರಹಗಳನ್ನು ಆಂತರಿಕ ಕಕ್ಷೆಗೆ ಉಡಾವಣೆ ಮಾಡಿದ್ದು, ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಮಾನವನ ಬದುಕಿಗೆ ಹಾಗೂ ಅಭಿವೃದ್ಧಿಗೆ ಇಸ್ರೋ ಮಹತ್ವದ ಪಾತ್ರ ವಹಿಸಿದೆ. ವಿದ್ಯಾರ್ಥಿಗಳು ಈ ಕ್ಷೇತ್ರಕ್ಕೆ ಬರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಪ್ರಾಚಾರ್ಯ ದಸ್ತಗೀರಸಾಬ್ ದಿನ್ನಿ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕವಾಗಿ ಬೆಳೆಯಬೇಕಾದರೆ ವೈಜ್ಞಾನಿಕ ಮನೋಭಾವನೆ ಬೆಳಿಸುವ ಇಂತಹ ಕಾರ್ಯಕ್ರಮಗಳು ಅನಿವಾರ್ಯವಾಗಿವೆ. ವಿದ್ಯಾರ್ಥಿಗಳು ವಿಜ್ಞಾನಿಗಳ ಸಾಧನೆ ಕುರಿತು ಅರಿತುಕೊಳ್ಳಬೇಕು ಎಂದು ಹೇಳಿದರು.
ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯ ಕುಂಟೆಪ್ಪ ಗೌರಿಪುರ, ವಿಜ್ಞಾನ ವಿಭಾಗದ ಮುಖ್ಯಸ್ಥ ಮಹಿಬೂಬ ಅಲಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಜೆ.ಎಲ್.ಈರಣ್ಣ, ಮಹಾಂತೇಶ ಅಂಗಡಿ ಇದ್ದರು.
ಉಪನ್ಯಾಸಕಿ ಪುಷ್ಪಾ ವಿಜ್ಞಾನಿಯನ್ನು ಪರಿಚಯಿಸಿದರು. ಬಸವಪ್ರಸಾದ ವಂದಿಸಿದರು. ಇಸ್ರತ್ ಬೇಗಂ ಕಾರ್ಯಕ್ರಮ ನಿರೂಪಿಸಿದರು.