ಲಿಂಗಸುಗೂರು (ರಾಯಚೂರು): ‘ಆಧುನಿಕ ಭರಾಟೆ, ವೈಜ್ಞಾನಿಕ ನಾಗಾಲೋಟದಲ್ಲಿ ಜನಸಾಮಾನ್ಯರ ಬೌದ್ಧಿಕ ಮಟ್ಟ ವಿಕಾಸಗೊಂಡಿವೆ. ಆದರೆ, ಭಾವನೆಗಳು ವಿಕಾಸಗೊಳ್ಳದಿರುವುದು ನೋವಿನ ಸಂಗತಿ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಭಾನುವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಮನುಷ್ಯ ಎಷ್ಟೇ ಸಂಪತ್ತು ಗಳಿಸಿದ್ದರೂ ಶಾಂತಿ ನೆಮ್ಮದಿ ಕಳೆದುಕೊಂಡಿದ್ದಾನೆ. ನಾಡ ಹಬ್ಬ ಆಚರಣೆ ಮೂಲಕ ಮನಸ್ಸುಗಳಲ್ಲಿ ಕೊಳೆ ನಿರ್ಮೂಲನೆಗೊಳಿಸುವ ಪ್ರಯತ್ನ ನಡೆಸುತ್ತ ಬಂದಿದ್ದೇವೆ. ಧಾರ್ಮಿಕ ಸಂಸ್ಕೃತಿಕ ಕಾರ್ಯಕ್ರಮಗಳು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಕಾರಿ ಆಗಲಿವೆ’ ಎಂದರು.
‘ಮೈಸೂರು ಮಹಾರಾಜರು ಆಚರಿಸಿಕೊಂಡು ಬಂದಿರುವ ದಸರಾ ಸಂಸ್ಕೃತಿಕ ವೈಭವ ಹೊಂದಿದೆ. ಆದರೆ, ರಂಭಾಪುರಿ ಪೀಠದ ಗುರುಮನೆಯ ದಸರಾ ಹಬ್ಬ ಕಲೆ, ಸಂಸ್ಕೃತಿ, ಅಧ್ಯಾತ್ಮಿಕ ಪುನರೋತ್ಥಾನಕ್ಕಗಿ ಆಚರಿಸುತ್ತ ಬಂದಿದೆ‘ ಎಂದು ಹೇಳಿದರು.
ಸಮ್ಮೇಳನ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತನಾಡಿ, ‘ಲಿಂಗಸುಗೂರು ಪಟ್ಟಣದಲ್ಲಿ ಗುರುಮನೆ ಶರನ್ನವರಾತ್ರಿ ನಾಡಹಬ್ಬ ರಾಜ್ಯಕ್ಕೆ ಮಾದರಿ ಆಗುವಂತೆ ಸಂಘಟಿಸಿರುವುದು ಬಹಳ ಸಂತೋಷವಾಗಿದೆ. ಇಂತಹ ಅಚರಣೆಗಳಿಂದ ಭಾರತೀಯ ಸಂಸ್ಕೃತಿ, ಪರಂಪರೆ ಮೌಲ್ಯಗಳ ಪುನರುತ್ಥಾನ ಹಾಗೂ ಬದುಕು ಶ್ರೀಮಂತಗೊಳ್ಳುವುದರಲ್ಲಿ ಸಂಶಯವಿಲ್ಲ’ ಎಂದರು.
ಅರಣ್ಯ, ಪರಿಸರ ಮತ್ತು ಸೂಕ್ಷ್ಮಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ, ಸಂಸದರಾದ ಸಂಗಣ್ಣ ಕರಡಿ, ರಾಜಾ ಅಮರೇಶ್ವರ ನಾಯಕ, ಶಾಸಕರಾದ ಡಾ. ಶಿವರಾಜ ಪಾಟೀಲ, ಹಂಪನಗೌಡ ಬಾದರ್ಲಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿದರು.
ಯಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ, ದೇವರಭೂಪುರದ ಅಭಿನವ ಗಜದಂಡ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ದೇವಾಪುರ ಶಿವಮೂರ್ತಿ ಶಿವಾಚಾರ್ಯರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಲೆಕ್ಕಿಹಾಳ ಇದ್ದರು.
ಧರ್ಮ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಮಾನಪ್ಪ ವಜ್ಜಲ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.