ರಾಯಚೂರು: ಜಾನಪದ ಸಾಹಿತ್ಯ ಎಲ್ಲಾ ಸಾಹಿತ್ಯಕ್ಕೆ ಮೂಲ ಸಾಹಿತ್ಯವಾಗಿದೆ. ಇದು ಸರ್ವಕಾಲಿಕವಾದದ್ದು ಇಂತಹ ಸಾಹಿತ್ಯವನ್ನು ಬೆಳೆಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ಕನ್ನಡ ಜಾನಪದ ಪರಿಷತ್ತು ರಾಜ್ಯ ಘಟಕದ ಅಧ್ಯಕ್ಷ ಡಾ. ಬಾಲಾಜಿ ಹೇಳಿದರು.
ನಗರದ ದುದಿಬೆನ್ ಠಾಕರ್ಸಿ ಜೋಬನಪುತ್ರ ಬಾಲಕಿಯರ ಪ್ರೌಢಶಾಲೆಯಲ್ಲಿ ಕನ್ನಡ ಜಾನಪದ ಪರಿಷತ್ತು ರಾಯಚೂರು ತಾಲ್ಲೂಕು ಘಟಕದಿಂದ ಈಚೆಗೆ ಏರ್ಪಡಿಸಿದ್ದ ‘ವಿಕಾಸಕ್ಕಾಗಿ ಜಾನಪದ’ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಧರ್ಮಗಳಲ್ಲಿ ಜಾನಪದ ಸಾಹಿತ್ಯ ಇದೆ. ಮುಸ್ಲಿಂ, ಕ್ರಿಶ್ಚನ್ ಧರ್ಮದಲ್ಲಿಯೂ ಜಾನಪದ ಸಾಹಿತ್ಯ ಅಪಾರವಾಗಿದೆ. ಜಾನಪದ ಸಾಹಿತ್ಯಕ್ಕೆ ಯಾವುದೇ ಜಾತಿ, ಮತ, ಧರ್ಮವಿಲ್ಲ ಎಂದರು.
ಸಾಹಿತಿ ಅಯ್ಯಪ್ಪಯ್ಯ ಹುಡಾ ಮಾತನಾಡಿ, ಜಾನಪದ ಸಾಹಿತ್ಯದ ಮುಖ್ಯ ಪ್ರಕಾರವಾದ ಒಗಟುಗಳು ನಶಿಸಿ ಹೋಗುತ್ತವೆ. ಈ ನಿಟ್ಟಿನಲ್ಲಿ ಜಾನಪದ ಗೀತೆಗಳನ್ನು, ಜಾನಪದ ಕಲೆಗಳನ್ನು ಬೆಳೆಸುವ ಜವಾಬ್ದಾರಿ ಇಂದಿನ ಪೀಳಿಗೆಯ ಮೇಲೆ ಇದೆ ಎಂದು ಹೇಳಿದರು.
ಜಿಲ್ಲಾ ಕನ್ನಡ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ದಂಡಪ್ಪ ಬಿರಾದರ ಮಾತನಾಡಿ, ಜಾನಪದ ಸಾಹಿತ್ಯಕ್ಕೆ ಸಾಮಾಜಿಕ ಸೌಹಾರ್ದತೆ ಬೆಳೆಸುವ ಶಕ್ತಿ ಇದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಾನಪದ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷ ಮುರಳೀಧರ ಕುಲಕರ್ಣಿ ಮಾತನಾಡಿ, ಕನ್ನಡ ಜಾನಪದ ಸಾಹಿತ್ಯಕ್ಕೆ ತನ್ನದೇ ಪರಂಪರೆಯಿದೆ. ಇಂದಿನ ಆಧುನೀಕರಣದ ನೆಪದಲ್ಲಿ ಸಮಾಜ ವಿಘಟನಗೊಳ್ಳುತ್ತಿದೆ. ಸಾಮಾಜಿಕ ನ್ಯಾಯ ಹಾಗೂ ನೈತಿಕತೆಯನ್ನು ಜಾನಪದ ಸಾಹಿತ್ಯವು ದೊರಕಿಸಿಕೊಡುತ್ತದೆ ಎಂದು ಹೇಳಿದರು.
ಜಾನಪದ ಅಕಾಡಮಿಯ ಪ್ರಶಸ್ತಿ ಪುರಸ್ಕೃತ ಶರಣಪ್ಪ ಗೋನಾಳ ಹಾಗೂ ಬಾಲಾಜಿ ಅವರನ್ನು ಸನ್ಮಾನಿಸಲಾಯಿತು.
ಪ್ರತಿಭಾ ಗೋನ್ಹಾಳ ಅವರು ಜಾನಪದ ಗೀತೆಗಳನ್ನು ಹಾಡಿದರು. ಶಿಕ್ಷಕಿ ವೈ.ಕೆ.ಯಶೋಧ ಸ್ವಾಗತಿಸಿದರು. ಸಹ ಶಿಕ್ಷಕ ವೆಂಕಟೇಶ ವಂದಿಸಿದರು. ಶಾಲೆಯ ಮುಖ್ಯಗುರು ರಾಜೇಂದ್ರ ಕುಮಾರ ದರ್ಗಾ ಇದ್ದರು.