ರಾಯಚೂರು: ಜಾನಪದವು ಗ್ರಾಮೀಣರ ಅಪ್ಪ ಕಲೆಗಳಾಗಿದ್ದು, ಅವುಗಳನ್ನು ಉಳಿಸುವ ಕೆಲಸ ಆಗಬೇಕಿದೆ ಎಂದು ಬಿಜೆಪಿ ಮುಖಂಡ ಎ.ಪಾಪಾರೆಡ್ಡಿ ಹೇಳಿದರು.
ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಪ್ರತಿಭಾ ಸುಗಮ ಸಂಸ್ಥೆಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈಚೆಗೆ ಏರ್ಪಡಿಸಿದ್ದ ಜಾನಪದ ವೈಭವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ಬಾಲಾಜಿ, ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತೇಶ ಪಾಟೀಲ್ ಅತ್ತನೂರು ಮಾತನಾಡಿದರು.
ಶ್ರೀ ಸೂಗೂರಯ್ಯತಾತ, ಗುರ್ಜಾಲ ಸಾನ್ನಿಧ್ಯ ವಹಿಸಿದ್ದರು. ಅತಿಥಿಳಾಗಿ ಇಲ್ಲೂರು ಗೋಪಾಲಯ್ಯ, ನಗರಸಭೆ ಸದಸ್ಯ ಜಯಣ್ಣ, ಸತ್ಯಪ್ಪ, ಟಿ. ಮಶಪ್ಪ, ವೀರೇಂದ್ರ ಪಾಟೀಲ್, ಮಲ್ಲಿಕಾರ್ಜುನ್, ದಂಡಪ್ಪ ಬಿರಾದಾರ, ಜಗನ್ನಾಥ ರಾಠಿ ಇದ್ದರು.
ಜಾನಪದ ವೈಭವ ಕಾರ್ಯಕ್ರಮವನ್ನು ಜಾನಪದ ಕಲಾವಿದ ಶರಣಪ್ಪ ಗೋನಾಳ ಅವರು ಅನುಭಾವ ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಪ್ರತಿಭಾ ಗೋನಾಳ ಜಾನಪದ ಗೀತೆ ಹಾಡಿ ಪ್ರೇಕ್ಷಕರ ಮನಗೆದ್ದರು.
ಮಹಾಲಕ್ಷ್ಮೀ ಪ್ರಭಾ ಕಂಬಾರ, ಎಲ್ಲಮ್ಮ ಜಾನಪದ ಗೀತೆ ಹಾಡಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿದರು. ನಾಗೇಶ ಗೋನಾಳ ಹಾಡು ವಿಶೇಷವಾಗಿತ್ತು. ಗದಗ ಜಿಲ್ಲೆಯ ಶಂಕ್ರಣ್ಣ ಕೊತಬಾಳ ತಂಡವು ಎಲ್ಲಮ್ಮನ ಜಾನಪದ ನೃತ್ಯ ಎಲ್ಲರ ಜನಮನದಲ್ಲಿ ಉಳಿಯಿತು. ಹಾಸ್ಯ ಕಲಾವಿದ ಮರಿಯಪ್ಪ ಗಂಗಾವತಿ ನಗಿಸಿದರು.
ನಾಡಿನ ಜಾನಪದ ಗಾಯಕ ಗುರುರಾಜ ಹೊಸಕೋಟೆ ಅವರು ಮೂಲ ಜಾನಪದ ಗೀತೆಗಳನ್ನು ತಮ್ಮ ಕಂಚಿನ ಕಂಠದ ಸಿರಿಯಿಂದ ಹಾಡಿ ಎಲ್ಲರನ್ನು ಮಂತ್ರಮುಗ್ಧಗೊಳಿಸಿದರು. ನಾಡಿನ ವಚನ ಗಾಯಕ ತೋಟಪ್ಪ ಉತ್ತಂಗಿ, ಜಿಂದಪ್ಪ ಅಸ್ಕಿಹಾಳ, ರಘುಪತಿ ಪೂಜಾರ ಕಾರ್ಯಕ್ರಮ ನಡೆಸಿಕೊಟ್ಟರು. ಮುರಳೀಧರ ಕುಲಕರ್ಣಿ ನಿರೂಪಿಸಿದರು.