ರಾಯಚೂರು: ಕೇಂದ್ರ ಸರ್ಕಾರ ಪೆಟ್ರೊಲ್, ಡೀಸೆಲ್ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಜಿಲ್ಲಾ ಜನತಾದಳದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಚಹಾಸೇವನೆ ಮಾಡಿ ಬುಧವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರತಿನಿತ್ಯ ಇಂದನ ದರಗಳ ಏರಿಕೆ ಮಾಡಿ ಜನಸಾಮಾನ್ಯರಿಗೆ ಅನ್ಯಾಯ ಮಾಡುತ್ತಿವೆ. ಎರಡು ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಪೆಟ್ರೊಲ್, ಡೀಸೆಲ್ ದರ ಕಡಿಮೆ ಮಾಡಬೇಕು ಎಂದು ಒತ್ತಾಯಿಸಿ ಹೋರಾಟ ಮಾಡಿದ್ದರು. ಈಗ ಅಧಿಕಾರದಲ್ಲಿದ್ದು ಪೆಟ್ರೊಲ್ ದರ ₹89 ಏರಿಕೆ ಮಾಡಿದ್ದು ಮುಂದಿನ ದಿನಗಳಲ್ಲಿ ₹100 ಕ್ಕೆ ಹೆಚ್ಚಿಸಬಹುದು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದಿನ ಬಳಕೆಯ ವಸ್ತುಗಳ ಬೆಲೆಗಳು ಹೆಚ್ಚಾಗಿವೆ ಎಂದರು.
ಚಹಾ ಮಾರುವ ಪ್ರಧಾನಿಯಿಂದ ದೇಶದ ಅಭಿವೃದ್ಧಿಯಾಗುತ್ತದೆ ಎಂದು ತಿಳಿದ ಜನರಿಗೆ ಚಹಾ ಕುಡಿಸಿ ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ‘ಸಬ್ಕಾ ಸಾತ್ ಸಬ್ಕಾ ವಿಕಾಸ್’ ಎಂದು ಘೋಷಣೆ ಮಾಡಿ ಬೆಲೆ ಹೆಚ್ಚಳ ಮಾಡಿ ಯಾವುದನ್ನು ವಿಕಾಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಶ್ರೀಲಂಕಾದಲ್ಲಿ ಪ್ರತಿ ಲೀಟರ್ ಗೆ ಪೆಟ್ರೋಲ್ ದರ ₹40, ಬಾಂಗ್ಲಾದೇಶದಲ್ಲಿ ₹50, ಪಾಕಿಸ್ತಾನದಲ್ಲಿ ₹60 ಇದೆ. ಆದರೆ, ಭಾರತದಲ್ಲಿ ಮಾತ್ರ ₹89 ಇದ್ದು ₹100 ಗಡಿ ಮುಟ್ಟುತ್ತಿದೆ. ತೈಲ ಮಾರುಕಟ್ಟೆಯಲ್ಲಿ ಪ್ರತಿ ತೈಲ ದರ ಡಾಲರ್ ಬೆಲೆಯಲ್ಲಿ ಕಡಿಮೆ ಇದ್ದರೂ ಕೂಡ ಕೇಂದ್ರ ಸರ್ಕಾರ ಖಾಸಗಿ ವ್ಯಾಪಾರಿಗಳ, ಅಂಬಾನಿಯ ರಿಲಿಯನ್ಸ್ ಪೆಟ್ರೋಲ್ ಕಂಪನಿ ಲಾಭಕ್ಕಾಗಿ ಬೆಲೆ ಏರಿಕೆ ಮಾಡುತ್ತಿದೆ ಎಂದು ದೂರಿದರು.
ಈಗಾಗಲೇ ರಾಜ್ಯ ಸರ್ಕಾರ ₹ ಪೆಟ್ರೊಲ್ ತೆರಿಗೆ ₹32 ಕೇಂದ್ರ ಸರ್ಕಾರ ₹30 ತೆರಿಗೆ ವಿಧಿಸುತ್ತಿದ್ದು ಇದನ್ನು ತಕ್ಷಣವೇ ಕಡಿತಗೊಳಿಸಿ ಪೆಟ್ರೊಲ್ ಮತ್ತು ಡೀಸೆಲ್ ದರವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾದ್ಯಕ್ಷ ಎಂ.ವಿರೂಪಾಕ್ಷಿ, ಯುವ ಮುಖಂಡ ಪವನ್ ಕುಮಾರ್, ಪದಾಧಿಕಾರಿಗಳಾದ ಶಿವಶಂಕರ್, ವಿಶ್ವನಾಥ ಪಟ್ಟಿ, ಪಿ.ಯಲ್ಲಪ್ಪ, ರಾಮಕೃಷ್ಣ, ಕುಮಾರಸ್ವಾಮಿ, ಖಲೀಲ್ ಪಾಷಾ ಇದ್ದರು.