ರಾಯಚೂರು: ಮಕ್ಕಳ ಮನಸ್ಸಿನಲ್ಲಿ ಚೈತನ್ಯ ಮತ್ತು ಬದುಕಿನ ದಾರಿ ದೀಪವಾಗಬೇಕಾದ ಹಬ್ಬವೆಂದರೆ ಘನ ಸರ್ಕಾರಗಳು ರೂಪಿಸಿದ ಮಕ್ಕಳ ಕಲಿಕಾ ಹಬ್ಬವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರ್ ಹೇಳಿದರು.
ನಗರದ ಅಸ್ಕಿಹಾಳ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ, ಸಿ.ಆರ್.ಸಿ., ರಾಯಚೂರು ದಕ್ಷಿಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಯಚೂರು ದಕ್ಷಿಣ ವಲಯ ಮಟ್ಟದ ಮಕ್ಕಳ ಕಲಿಕಾ ಹಬ್ಬ ಉದ್ಘಾಟಿಸಿ ಮಾತನಾಡಿದರು.
ನಾಡಿನಲ್ಲಿ ಈಗಾಗಲೇ ಜರುಗಿ ಹೋದ ಮತ್ತು ಮುಂದೆ ಆಗಮಿಸುತ್ತಿರುವ ದೊಡ್ಡ ದೊಡ್ಡ ಹಬ್ಬಗಳು ಇವೆ. ರೈತರ ಹಾಗೂ ಮಹಿಳೆಯರ ಸಡಗರದ ಮಕರ ಸಂಕ್ರಾಂತಿ ಹಬ್ಬವಿರಬಹುದು, ಯುಗಾದಿ ಹಬ್ಬವಿರಬಹುದು, ಮುಂದೆ ಮಹಾಶಿವರಾತ್ರಿ ಹಬ್ಬವಿರಬಹುದು ಇವೆಲ್ಲ ನಮ್ಮ ನಾಡಿನ, ದೇಶದ ಸಂಸ್ಕೃತಿ ಸಂಪ್ರದಾಯಗಳನ್ನು ಬೆಳೆಸುವಂತ ಹಬ್ಬಗಳು ಅವೆಲ್ಲವೂ ಪುಣ್ಯ ಪ್ರಾಪ್ತಿ ಮಾಡಿಕೊಳ್ಳಲು. ಸರ್ವ ಮಕ್ಕಳು ಈ ಒಂದು ಕಲಿಕಾ ಹಬ್ಬದ ಯೋಜನೆ ಮತ್ತು ಯೋಚನೆಗಳು ತಮ್ಮಲ್ಲಿ ಮೈಗೂಡಿಸಿಕೊಂಡು ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಮಕ್ಕಳ ಸರಿಯಾದ ಮಾರ್ಗದಲ್ಲಿ ಶಿಕ್ಷಣ ಪಡೆದು ಮಾತಾ ಪಿತೃಗಳಿಗೆ, ಶಾಲೆಗೆ ಮತ್ತು ಕಾರ್ಯಕ್ರಮವನ್ನು ಆಯೋಜನೆ ಮಾಡಿದ ಗ್ರಾಮದ ಸರ್ವ ಹಿರಿಯರ ಹೆಸರಿಗೆ ಕೀರ್ತಿ ತರಬೇಕು ಎಂದು ಹೇಳಿದರು.
ಜಿಲ್ಲಾ ಸಾರ್ವಜನಿಕ ಶಿಕ್ಷ ಇಲಾಖೆಯ ಉಪನಿರ್ದೇಶಕ ವೃಷಬೇಂದ್ರಸ್ವಾಮಿ ಮಾತನಾಡಿ, ಮಕ್ಕಳ ಕಲಿಕಾ ಹಬ್ಬವನ್ನು ಈ ಗ್ರಾಮದ ಹಿರಿಯರು ಮತ್ತು ಈ ಶಾಲೆಯ ಮುಖ್ಯ ಗುರುಗಳು, ಸರ್ವ ಸಹ ಶಿಕ್ಷಕರು ಕಳೆದ ಒಂದು ತಿಂಗಳಿನಿಂದ ಕಾರ್ಯಕ್ರಮದ ರೂಪುರೇಷೆಗಳನ್ನು ತಯಾರಿಸಿ ಮಾಡಿದ್ದಾರೆ. ಇಷ್ಟೊಂದು ಅದ್ದೂರಿಯಾಗಿ ಆಯೋಜನೆ ಮಾಡಿರುವುದು ತುಂಬ ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಈ ಶಾಲೆಗೆ ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಸೂಚಿಸಲಾಗುವುದು ಎಂದು ತಿಳಿಸಿದರು.
ಅರ್ಪಿತಾ ಅಸ್ಕಿಹಾಳ ಭರತನಾಟ್ಯ ಮಾಡಿದರು. ಮುಖ್ಯಗುರು ದೇವೆಂದ್ರಪ್ಪ, ನಗರಸಭೆ ಸದಸ್ಯ, ಎಂ. ತಿಮ್ಮಪ್ಪ, ಮುಖಂಡ ಎಂ. ಸುಭಾಷ, ಎಸ್ಡಿಎಂಸಿ ಅಧ್ಯಕ್ಷ ಪಿ. ಸೂರ್ಯನಾರಾಯಣ, ಸದಸ್ಯರಾದ ಸಂಗನಗೌಡ, ಶಿವರಾಮಗೌಡ, ತಿರುಪತಿ ನಾಯಕ, ಸಹ ಶಿಕ್ಷಕರಾದ ಶಶಿಕಲಾ, ಅಂಭಾದೇವಿ, ವನಿತಾ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.