ರಾಯಚೂರು: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾ ಪೊಲೀಸ್ ಮೈದಾನದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ್ ನಾಯಕ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಆನಂತರ ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕ ಎಂದು ಕರೆಯುತ್ತಿದ್ದ ಈ ಭಾಗವನ್ನು 2019 ರಲ್ಲಿ ಮರುನಾಮಕರಣ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಎಂದು ಹೊಸ ಹೆಸರಿನೊಂದಿಗೆ ಈ ಭಾಗದ ಅಭಿವೃದ್ಧಿ್ಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಸರ್ಕಾರವು ಶಕ್ತಿ ತುಂಬಿದೆ ಎಂದರು.
ಕೆಕೆಆರ್ಡಿಯಿಂದ ಇದುವರೆಗೂ ರಾಯಚೂರು ಜಿಲ್ಲೆಗೆ ₹1,679 ಕೋಟಿ ಅನುದಾನ ಬಿಡುಗಡೆಯಾಗಿದೆ. 2019 ರಿಂದ ಇದುವರೆಗೂ ₹898 ಕೋಟಿ ಮಂಜೂರಿಯಾಗಿದೆ. ರಾಯಚೂರು ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ₹185.57 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. 315 ಎಕರೆ ಜಮೀನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.
ಈ ಭಾಗವನ್ನು ವಿಮೋಚನೆಗೊಳಿಸಲು ಅನೇಕ ಮಹನೀಯರು ಹೋರಾಡಿದ್ದಾರೆ. ಅವರೆಲ್ಲರ ಕೊಡುಗೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಎಂ.ನಾಗಪ್ಪ, ಡಾ.ಬಿ.ಜಿ.ದೇಶಪಾಂಡೆ, ಜನಾರ್ದನರಾವ್ ದೇಸಾಯಿ, ಗುಡಿಹಾಳ ಹನುಮಂತರಾವ್, ರಾಮಾಚಾರ ಜೋಷಿ, ಎಲ್.ಕೆ.ಸರಾಫ್, ಗಾಣದಾಳ ನಾರಾಯಣಪ್ಪ, ಕಸಬೆ ಪಾಂಡುರಂಗರಾವ್, ಜಿ.ಮಧ್ವರಾಯ ಸೇರಿದಂತೆ ಸಹಸ್ರಾರು ಹೋರಾಟಗಾರರ ತ್ಯಾಗದಿಂದ ಈ ಭಾಗವು ಸ್ವತಂತ್ರಗೊಂಡಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ., ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರ ಮತ್ತಿತರರು ಇದ್ದರು.