ಕನ್ನಡ ವ್ಯವಹಾರಿಕ ಭಾಷೆಯಾಗಲಿ

ಮಸ್ಕಿ: ‘ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿದ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿದ್ದು, ಕನ್ನಡಿಗರಿಗೆ ಹೆಮ್ಮೆಯ ವಿಷಯ’ ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಹೇಳಿದರು.
ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಪಟ್ಟಣದ ಸರ್ಕಾರಿ ಕೇಂದ್ರೀಯ ಶಾಲಾ ಆವರಣದಲ್ಲಿ ಸೋಮವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,‘ಅನೇಕ ಮಹನೀಯರು ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಭಾಷೆಯ ಗೌರವವನ್ನು ಹೆಚ್ಚಿಸಿದ್ದಾರೆ’ ಎಂದರು.
ಪ್ರತಿಯೊಂದು ವ್ಯವಹಾರ ಕನ್ನಡದಲ್ಲಿ ನಡೆಯುವಂತಾಗಬೇಕು. ಪ್ರತಿಯೊಬ್ಬರೂ ಕನ್ನಡದಲ್ಲಿಯೇ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ತಹಶೀಲ್ದಾರ್ ಕವಿತಾ ಆರ್. ಮಾತನಾಡಿ,‘ಕನ್ನಡ ಬೆಳೆಸುವ ಜವಾಬ್ದಾರಿ ನಮ್ಮದು. ಕನ್ನಡ ನಾಡು–ನುಡಿ ರಕ್ಷಣೆಗೆ ಪಣ ತೊಡಬೇಕು. ಬೇರೆ ಭಾಷೆಗಳನ್ನು ಗೌರವಿಸುವುದರ ಜತೆಗೆ ನಮ್ಮ ಭಾಷೆಯನ್ನು ಪ್ರೀತಿಸಬೇಕು’ ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ್, ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ, ಸಿಪಿಐ ಸಂಜೀವ್ ಬಳಿಗಾರ, ಸಬ್ ಇನ್ಸ್ಪೆಕ್ಟರ್ ಸಿದ್ಧರಾಮ ಸೇರಿದಂತೆ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಕನ್ನಡಪರ ಸಂಘಟನೆಗಳಿಂದ ಧ್ವಜಾರೋಹಣ: ಪಟ್ಟಣದ ವಿವಿಧೆಡೆ ಕನ್ನಡಪರ ಸಂಘಟನೆಗಳು ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಹಳೆ ಬಸ್ ನಿಲ್ದಾಣದಲ್ಲಿ ಕರವೇ (ನಾರಾಯಣಗೌಡ ಬಣ) ಅಧ್ಯಕ್ಷ ದುರ್ಗರಾಜ ವಟಗಲ್, ಗಾಂಧಿನಗರದಲ್ಲಿ ಕರವೇ (ಪ್ರವೀಣ ಶೆಟ್ಟಿ ಬಣ) ಅಧ್ಯಕ್ಷ ಅಶೋಕ ಮುರಾರಿ, ಅಶೋಕ ವೃತ್ತದಲ್ಲಿ ನಮ್ಮ ಕರ್ನಾಟಕ ಸಂಘಟನೆಯ ಬಸವರಾಜ ಉದ್ಬಾಳ, ಕರವೇಯ (ಶಿವರಾಮೆಗೌಡ ಬಣ) ಆರ್.ಕೆ.ನಾಯಕ, ಕವಿತಾಳ ವೃತ್ತದಲ್ಲಿ ಜಯ ಕರ್ನಾಟಕ ಸಂಘಟನೆಯ ಯಮನೂರ ಒಡೆಯರ್, ಎಪಿಎಂಸಿ ಬಳಿ ವಿಜಯ ಸೇನೆ ಅಧ್ಯಕ್ಷ ಕೆ. ಮಲ್ಲಯ್ಯ ಕನ್ನಡ ಧ್ವಜಾರೋಹಣ ನೆರವೇರಿಸಿದರು.
ತ್ರಿಚಕ್ರ ವಾಹನ ವಿತರಣೆ: ಶಾಸಕ ಆರ್. ಬಸನಗೌಡ ತುರ್ವಿಹಾಳ ಅವರು ಪುರಸಭೆಯ 18-19 ನೇ ಸಾಲಿನ ಹಣಕಾಸು ಯೋಜನೆ ಅಡಿಯಲ್ಲಿ 6 ಜನ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.