ರಾಯಚೂರು: ಈಚೆಗೆ ಸುರಿದ ನಿರಂತರ ಮಳೆಯಿಂದಾಗಿ ತಾಲ್ಲೂಕಿನ ಮೀರಾಪುರ ಗ್ರಾಮದಲ್ಲಿ ಸಾಕಷ್ಟು ಬೆಳೆ ನಷ್ಟ ಹಾಗೂ ಮನೆಗಳಿಗೆ ಹಾನಿಯಾಗಿದೆ. ಈ ಕುರಿತು ಪರಿಶೀಲಿಸಿ ಕೂಡಲೇ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರೈತ ಕೃಷಿ ಕಾರ್ಮಿಕ ಸಂಘಟನೆ (ಆರ್ ಕೆಎಸ್) ಜಿಲ್ಲಾ ಘಟಕದ ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಆನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಿ, ಜಿಲ್ಲೆಯಲ್ಲಿ ಉಂಟಾದ ಪ್ರವಾಹದಿಂದ ಮಿರಾಪೂರ ಗ್ರಾಮದಲ್ಲಿ ಹಲವೆಡೆ ಬೆಳೆಹಾನಿ ಮತ್ತು ಮನೆ ಕುಸಿತವಾಗಿದ್ದು ಗ್ರಾಮಸ್ಥರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಬಿತ್ತನೆ ಹಾಗೂ ಗೊಬ್ಬರಕ್ಕೆ ಮಾಡಿದ ಖರ್ಚು ಕೂಡ ಸಿಗದೇ ರೈತರು ಅರ್ಥಿಕ ತೊಂದರೆಗೆ ಒಳಗಾಗಿದ್ದಾರೆ. ಮನೆ ಕುಸಿತದಿಂದ ಅನೇಕರು ಬೀದಿಯಲ್ಲಿ ಜೀವನ ಮಾಡುವಂತಾಗಿದೆ ಎಂದು ದೂರಿದರು.
ಹಾನಿಗೊಳಗಾದ ಸಂತ್ರಸ್ತರಿಗೆ ಮುಖ್ಯಮಂತ್ರಿ ಘೋಷಿಸಿದ ತಾತ್ಕಾಲಿಕ ಪರಿಹಾರವನ್ನೂ ವಿತರಿಸಬೇಕು. ಕುಸಿದ ಮನೆಗಳ ಕುಟುಂಬದವರಿಗೆ ವಿವಿಧ ವಸತಿ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿ ಕೊಡಬೇಕು.
ಗ್ರಾಮದ ಪಕ್ಕದ ತಗ್ಗು ಪ್ರದೇಶದಲ್ಲಿ ನೀರು ತುಂಬಿ ಮನೆಗಳಿಗೆ ನುಗ್ಗದಂತೆ ಬೇರೆ ಕಡೆ ಹರಿವು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಸಮಿತಿಯ ಸದಸ್ಯ ಚನ್ನಬಸವ ಜಾನೇಕಲ್, ಆರ್ ಕೆಎಸ್ ಜಿಲ್ಲಾ ಸಂಘಟನಾ ಪ್ರಮೋದ ಕುಮಾರ ಜಿ, ಮೌನೇಶ, ಅಶೋಕ, ರೈತರಾದ ಮಹಾದೇವ, ರತ್ನಮ್ಮ, ನಾಗಮ್ಮ, ಚನ್ನಮ್ಮ ಸೇರಿದಂತೆ ಘಟಕದ ಹಲವು ಪದಾಧಿಕಾರಿಗಳು ಇದ್ದರು.