ರಾಯಚೂರು: ಜನರು ಚಿಕಿತ್ಸೆ ಸಿಗದೆ ಸಾವು ನೋವು ಅನುಭವಿಸುತ್ತಿದ್ದಾರೆ. ಕೆಲಸ ಕಳೆದುಕೊಂಡಿದ್ದಾರೆ. ಆದರೆ ಸರ್ಕಾರ ಮಾತ್ರ ಹಣ ಮಾಡುವುದರಲ್ಲಿ ನಿರತವಾಗಿದೆ. ರಾಜ್ಯಕ್ಕೆ ಎದುರಾದ ದುರಂತವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಶಾಸಕ ಕೃಷ್ಣ ಭೈರೇಗೌಡ ಆರೋಪಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನದಲ್ಲಿಯೇ ಕಂಡರಿಯದ ಸಂಕಷ್ಟ ಬಂದಿದೆ. ಮಾರ್ಚ್ನಲ್ಲಿ ರಾಜ್ಯದಲ್ಲಿ ಒಂದೇ ಪ್ರಕರಣ ಇತ್ತು. ಆರಂಭದಲ್ಲಿ ಇದು ಅರ್ಥ ಆಗಿರಲಿಲ್ಲ. ಆದರೆ ಬೇರೆ ದೇಶಗಳ ಸನ್ನಿವೇಶ ಕಂಡು ರೋಗ ನಿಯಂತ್ರಿಸಬಹುದಿತ್ತು. ಈಗ ದೇಶ ಪ್ರಪಂಚದಲ್ಲಿ ಎರಡನೇ ಸ್ಥಾನಕ್ಕೆ ಬಂದಿದೆ. ಸುರಕ್ಷಿತವಾಗಿದ್ದ ದೇಶ ಇಂಥ ಪರಿಸ್ಥಿತಿಗೆ ಬರಲು ಆಡಳಿತ ಪಕ್ಷಗಳ ಹೊಣೆ ಹೊರಬೇಕು ಎಂದರು.
ಜನ ಸಾವು ನೋವು ಅನುಭವಿಸುತ್ತಿದ್ದಾರೆ. ಚಿಕಿತ್ಸೆ ಸಿಗುತ್ತಿಲ್ಲ. ಆಸ್ಪತ್ರೆಗಳಿಗೆ ಲಕ್ಷಾಂತರ ಹಣ ಕಟ್ಟುತ್ತಿದ್ದಾರೆ. ಕೊರೊನಾದಲ್ಲೂ ಭ್ರಷ್ಟಾಚಾರ ಮಾಡುವುದು ಬಿಜೆಪಿ ಸಂಸ್ಕಾರ ಎನ್ನುವಂತಾಗಿದೆ. ವೃಥಾ ಆರೋಪ ಮಾಡುವುದಿಲ್ಲ. ದಾಖಲೆ ಸಮೇತ ಆರೋಪ ಮಾಡಲಾಗಿದೆ. ದೊಡ್ಡ ಪ್ರಮಾಣದಲ್ಲಿ ದುಡ್ಡು ಮಾಡುತ್ತಿದ್ದಾರೆ. ತನಿಖೆಗೆ ಸರ್ಕಾರ ಸಹಕಾರ ಕೊಡುತ್ತಿದೆ. ಸಿದ್ದರಾಮಯ್ಯನವರಿಗೂ ದಾಖಲೆಗಳನ್ನು ಕೊಡುತ್ತಿಲ್ಲ ಎಂದು ಹೇಳಿದರು.
ವೆಂಟಿಲೇಟರ್, ಪಿಪಿಇ ಕಿಟ್ ಖರೀದಿಯಲ್ಲೂ ಅಕ್ರಮವಾಗಿದೆ. ಧರ್ಮಲ್ ಸ್ಕ್ಯಾನರ್ಗಳನ್ನು ಕೂಡ ದುಪ್ಪಟ್ಥು ದರಕ್ಕೆ ಖರೀದಿಸಲಾಗಿದೆ. ಖಾಸಗಿ ಆಸ್ಪತ್ರೆಗಳು ದುಬಾರಿ ದರವನ್ನು ನಿಗದಿ ಮಾಡುತ್ತಿವೆ. ಮೂರು ಮಂತ್ರಿಗಳು ಭಿನ್ನ ರೀತಿಯಲ್ಲಿ ಹೇಳಿಕೆ ನೀಡುತ್ತಾರೆ. ಕೂಡಲೇ ಸರ್ಕಾರ ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು.
ವಿಧಾನ ಪರಿಷತ್ ಸದಸ್ಯರಾದ ವಿಜಯಸಿಂಗ್, ಬಸವರಾಜ ಪಾಟೀಲ ಇಟಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ನಾಯಕ, ಶಾಸಕ ಬಸನಗೌಡ ದದ್ದಲ, ಮುಖಂಡರಾದ ಹಂಪನಗೌಢ ಬಾದರ್ಲಿ, ಶರಣಪ್ಪ ಮಟ್ಟೂರು, ವಸಂತಕುಮಾರ್, ಬಾದರ್ಲಿ ಬಸನಗೌಡ ಇದ್ದರು.