ಸಿಂಧನೂರು: ಪಿಕಪ್ ಡ್ಯಾಂ ಕಳಪೆ ಕಾಮಗಾರಿ ಆಗಿರುವುದಕ್ಕೆ ಶಾಸಕ ವೆಂಕಟರಾವ್ ನಾಡಗೌಡ ಅಧಿಕಾರಿಗಳು ಹಾಗೂ ಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ತಾಲ್ಲೂಕಿನ ಕುನ್ನಟಗಿ ಗ್ರಾಮದ ಬಳಿ ಸಣ್ಣ ನೀರಾವರಿ ಇಲಾಖೆಯಿಂದ ₹ 1 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪಿಕಪ್ ಡ್ಯಾಂ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಉದ್ಘಾಟನೆ ಮಾಡುವ ಮೊದಲೇ ಡ್ಯಾಂ ನೀರಿಗೆ ಕೊಚ್ಚಿ ಹೋಗಿರುವುದನ್ನು ನೋಡಿಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ‘ತಮ್ಮ ಅಧಿಕಾರದ ಅವಧಿಯಲ್ಲಿ ಯಾವುದೇ ಕಾಮಗಾರಿ ಕಳಪೆಯಾಗಿದ್ದರೂ ಅದಕ್ಕೆ ತಾವೇ ಜವಾಬ್ದಾರಿಯಾಗಿದ್ದೇನೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ನೋಟಿಸ್ ನೀಡಿ ಅವರಿಂದ ಗುಣಮಟ್ಟದ ಪಿಕ್ಆಪ್ ಡ್ಯಾಂ ನಿರ್ಮಾಣ ಕಾಮಗಾರಿ ಮಾಡಿಸ ಲಾಗುವುದು’ ಎಂದು ಹೇಳಿದರು.
‘ತಮ್ಮ ಕುಟುಂಬದ ಯಾರೊಬ್ಬರು ಗುತ್ತಿಗೆ ಕೆಲಸ ಮಾಡುವುದಿಲ್ಲ. ಆದರೆ ಬಾದರ್ಲಿ ಕುಟುಂಬದವರು ಗುತ್ತಿಗೆದಾರಿಗೆ ಮಾಡುವುದು ತಾಲ್ಲೂಕಿನ ಜನತೆಗೆ ಗೊತ್ತಿದೆ. ಹಂಪನಗೌಡ ಬಾದರ್ಲಿ ಅವರು ಶಾಸಕರಾಗಿದ್ದ ಅವಧಿಯಲ್ಲಿ ಹಲವಾರು ಕಡೆ ಕೆಲಸ ಮಾಡದೆ ಸರ್ಕಾರ ಹಣ ನುಂಗಿ ಹಾಕಿರುವ ದಾಖಲೆಗಳು ತಮ್ಮ ಬಳಿ ಇದೆ. ಕಾಲ ಬಂದಾಗ ಅವುಗಳನ್ನು ದಾಖಲೆ ಸಮೇತ ಬಹಿರಂಗ ಪಡಿಸಲಾಗುವುದು’ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.