ರಾಯಚೂರು:ನಗರಸಭೆ ಚುನಾವಣೆಗಾಗಿ ಶುಕ್ರವಾರ ಮತದಾನ ಬಿರುಸಿನಿಂದ ಸಾಗಿದ್ದು, ವಾರ್ಡ್ ಸಂಖ್ಯೆ 26 ಮತ್ತು 18 ರಲ್ಲಿ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ಮಧ್ಯೆ ವಾದ್ವಾದ ನಡೆದು ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಪೊಲೀಸರು ಅಭ್ಯರ್ಥಿಗಳನ್ನು ಸಮಾಧಾನಪಡಿಸಿ ವಾತಾವರಣ ಹತೋಟಿಗೆ ತಂದರು.
ವಾರ್ಡ್ ಸಂಖ್ಯೆ 26 ರಲ್ಲಿ ಬಿಜೆಪಿ ಅಭ್ಯರ್ಥಿ ವಿಜಯರಾಜ ಮೋತಾ ಮತ್ತು ಪಕ್ಷೇತರ ಅಭ್ಯರ್ಥಿ ರಾಜಗೋಪಾಲ ಅವರು ಮತಗಟ್ಟೆಯಲ್ಲಿಯೇ ಗಲಾಟೆ ಆರಂಭಿಸಿದ್ದರು. ಇದರಿಂದ ಕೆಲಕಾಲ ಮತದಾನ ಸ್ಥಗಿತವಾಗಿತ್ತು.
ವಾರ್ಡ್ ಸಂಖ್ಯೆ 18 ರಲ್ಲಿ ಪಕ್ಷೇತರ ಅಭ್ಯರ್ಥಿ ಎ.ಮಾರೆಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ಲಲಿತಾ ಕಡಗೋಲ ಅವರ ಪತಿ ಆಂಜೀನೆಯ ಅವರ ಮಧ್ಯೆ ವಾಗ್ವಾದ ನಡೆಯಿತು. ಮತಗಟ್ಟೆ ಪಕ್ಕದಲ್ಲಿದ್ದ ಬೆಂಬಲಿಗರು ಕೂಡಾ ಪರಸ್ಪರ ವಾಗ್ವಾದ ಆರಂಭಿಸಿದ್ದರು. ಪೊಲೀಸರು ಎಲ್ಲರನ್ನು ಚದುರಿಸಲು ಲಾಠಿ ಕೈಗೆ ತೆಗೆದುಕೊಳ್ಳಬೇಕಾಯಿತು. ಆದರೆ ಪರಿಸ್ಥಿತಿ ಹತೋಟಿಗೆ ಬಂದಿದ್ದರಿಂದ ಲಾಠಿ ಪ್ರಹಾರ ಮಾಡುವುದು ತಪ್ಪಿತು.