ರಾಯಚೂರು: 'ಈ ವಯಸ್ಸಿನಲ್ಲೂ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿರುವುದನ್ನು ನೋಡಿ ಯಡಿಯೂರಪ್ಪ ಅವರಿಗೆ ಜನರು ಪಕ್ಷಾತೀತವಾಗಿ, ಜಾತ್ಯತೀತವಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದು ರಂಭಾಪುರಿ ಜಗದ್ಗುರು ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮಿ ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಸೋಮವಾರ ನಗರಕ್ಕೆ ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
'ಒಂದು ವೇಳೆ ಮುಖ್ಯಮಂತ್ರಿಯನ್ನು ಬದಲಿಸಿದರೆ, ಬಿಜೆಪಿ ಮೇಲೆ ದೊಡ್ಡ ಹೊಡೆತ ಬೀಳಲಿದೆ. ಅವರನ್ನು ಬದಲಾವಣೆ ಮಾಡುವುದಿಲ್ಲ ಎನ್ನುವ ಆತ್ಮವಿಶ್ವಾಸ ಹೊಂದಿದ್ದೇನೆ' ಎಂದು ಹೇಳಿದರು.
'ಸರ್ಕಾರ ರಚನೆಯಾದ ಆರಂಭದಲ್ಲಿ ರಾಜ್ಯದಲ್ಲಿ ನೆರೆಹಾವಳಿ ಸಮಸ್ಯೆ ಕಾಣಿಸಿಕೊಂಡಿತ್ತು. ಅದರಿಂದ ಹೊರಬರುತ್ತಿದ್ದಂತೆ ಕೊರೊನಾ ಹಾವಳಿ ಶುರುವಾಯಿತು. ಇದೆಲ್ಲದರ ಮಧ್ಯೆಯೂ ಯಡಿಯೂರಪ್ಪ ಅವರು ಸಚಿವರ ಸಹಕಾರ ಮತ್ತು ಜನರ ಸಹಕಾರದೊಂದಿಗೆ ಯಶಸ್ವಿಯಾಗಿ ಆಡಳಿತ ನಡೆಸುತ್ತಿದ್ದಾರೆ' ಎಂದರು.
'ಯಡಿಯೂರಪ್ಪ ಅವರ ಜನಪರಕಾಳಜಿ ಬಗ್ಗೆ ಯಾರು ಅಲ್ಲೆಗಳೆಯುವಂತಿಲ್ಲ. ನಾವು ಅಷ್ಟೇ ಅಲ್ಲ ಸುತ್ತೂರು ಶ್ರೀಗಳು, ಆದಿಚುಂಚನಗಿರಿಯವರು ಸಹ ಬೆಂಬಲ ಸೂಚಿಸಿದ್ದಾರೆ' ಎಂದು ಹೇಳಿದರು.