ರಾಯಚೂರು: ಕೃಷಿ ಕಾರ್ಮಿಕರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಾಗೂ ಒಕ್ಕಲುತನದ ಖರ್ಚು ಕಡಿಮೆಗೊಳಿಸಿ ಕೃಷಿ ಲಾಭದಾಯಕವಾಗಲು ಯಂತ್ರಗಳು ಸಹಕಾರಿಯಾಗಿವೆ ಎಂದು ಕೃಷಿ ಇಲಾಖೆಯ ರಾಜ್ಯ ಕಾರ್ಯದರ್ಶಿ ಎಂ.ಮಹೇಶ್ವರರಾವ್ ಹೇಳಿದರು.
ನಗರದ ಪವನ್ ಮೆನಷನ್ ಹೋಟೆಲ್ನಲ್ಲಿ ಭಾರತೀಯ ಹತ್ತಿ ನಿಗಮ ನಿಯಮಿತ ಭಾರತ ಸರ್ಕಾರದ ಉಪಕ್ರಮ ವಸ್ತ್ರ ಮಂತ್ರಾಲಯ ಹುಬ್ಬಳ್ಳಿ ಶಾಖೆಯಿಂದ ಶುಕ್ರವಾರ ಆಯೋಜಿಸಿದ್ದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಯ ರೈತರಿಗೆ ಕಪಾಸ್ ಪ್ಲಕ್ಕರ್ ಹತ್ತಿ ಬಿಡಿಸುವ ಯಂತ್ರಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದಲ್ಲಿ ಇತ್ತೀಚಿಗೆ ಕೃಷಿಯಲ್ಲಿ ಕೆಲಸ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಕೃಷಿ ಚಟುವಟಿಕೆಯ ಖರ್ಚು ಕೂಡ ಅಧಿಕವಾಗುತ್ತಿದೆ. ಕೃಷಿ ಕ್ಷೇತ್ರದ ಸಮಸ್ಯೆಗಳಿಂದ ಬಹಳಷ್ಟು ಜನರು ಕೃಷಿಯಿಂದ ವಿಮುಖರಾಗುತ್ತಿದ್ದು, ಬೇರೆ ಕ್ಷೇತ್ರಗಳಿಗೆ ಹೋಗುತ್ತಿದ್ದಾರೆ ಎಂದರು.
ರೈತರು ಬೆಳೆದ ಬೆಳೆಗಳಿಗೆ ಒಳ್ಳೆಯ ಬೆಲೆ ದೊರಕಿಸಲು ಬೆಂಬಲ ಬೆಲೆ ಘೋಷಣೆ ಮಾಡಲಾಗಿದ್ದು, ಖರೀದಿ ಕೇಂದ್ರಗಳು ಆರಂಭಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸುವ ಮೂಲಕ ರೈತರ ಬೆಳೆದ ಬೆಳೆಯನ್ನು ಖರೀದಿ ಮಾಡಲು ಅವಕಾಶ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಮಳೆ ಅಭಾವದಿಂದ ಕಡಿಮೆ ಪ್ರಮಾಣದ ಇಳುವರಿ ಬರುವ ಸಾಧ್ಯತೆಯಿದೆ. ಆದರೂ, ಸಿಸಿಐ ಹತ್ತಿ ಖರೀದಿಗೆ ಮುಂದೆ ಬಂದಿದ್ದು, ಈಗಾಗಲೇ ಚರ್ಚೆ ನಡೆಸಲಾಗಿದೆ. ಹತ್ತಿ ಬೆಳೆಯುವ ಪ್ರದೇಶದಲ್ಲಿ ಹೆಚ್ಚಿನ ರೈತರಿಗೆ ಮಾಹಿತಿ ಕೊಡುವ ಕೆಲಸ ಮಾಡಲಾಗುತ್ತದೆ ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ರೈತರು ಪ್ರಮಾಣಿತವಾದ ಬೀಜಗಳನ್ನು ಖರೀದಿಸಲು ಜಾಗೃತಿ ಮೂಡಿಸಲಾಗುತ್ತಿದೆ. ಗುಣಮಟ್ಟದ ಬೀಜ ಖರೀದಿಸಿದರೆ ಉತ್ತಮವಾದ ಫಸಲು ಬರಲಿದೆ ಎಂದು ಹೇಳಿದರು.
ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಿದಾಗಲೂ ಪ್ರಾಮಾಣಿತವಲ್ಲದ ಬೀಜಗಳನ್ನು ಖರೀದಿಸುವ ರೈತರು ಕೃಷಿ ಇಲಾಖೆಯ ಅಧಿಕಾರಿಗಳ ಬಳಿಗೆ ಬಂದರೆ ಏನೂ ಮಾಡಲಾಗಲ್ಲ. ಆದ್ದರಿಂದ ಪ್ರಾಮಾಣಿತವಾದ ಬೀಜಗಳನ್ನು ಖರೀದಿ ಮಾಡಬೇಕು ಎಂದರು.
ಸಿಸಿಐ ಅಧಿಕಾರಿಗಳು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.