ಕವಿತಾಳ: ‘ಅಂಗನವಾಡಿ ಕೇಂದ್ರಗಳಲ್ಲಿ ಸ್ವಚ್ಛತೆ ಕಾಪಾಡುವುದರ ಜತೆಗೆ ಸಮಯ ಪಾಲನೆ ಮಾಡಬೇಕು ಮತ್ತು ಮಕ್ಕಳನ್ನು ಕೇಂದ್ರಗಳತ್ತ ಆಕರ್ಷಿಸುವಲ್ಲಿ ಕಾರ್ಯಕರ್ತೆಯರು ಕಾಳಜಿ ವಹಿಸಬೇಕು’ ಎಂದು ಸಿಡಿಪಿಒ ಮುದುಕಪ್ಪ ಹರವಿ ಹೇಳಿದರು
ಪಟ್ಟಣದ ಉರ್ದು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪಾಮನಕಲ್ಲೂರು ವಲಯ ವ್ಯಾಪ್ತಿಯ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕುರಿತ 4ನೇ ಹಂತದ ಮೂರು ದಿನಗಳ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನೀಡುವ ಆಟಿಕೆಗಳು ಮತ್ತು ಕಲಿಕಾ ಸಾಮಗ್ರಿಗಳು ಆಕರ್ಷಕವಾಗಿದ್ದು ಕಾರ್ಯಕರ್ತೆಯರು ಮಗುವಿನ ಬಗ್ಗೆ ವೈಯಕ್ತಿಕ ಕಾಳಜಿ ವಹಿಸಬೇಕು, ವಾಟ್ಸ್ಆ್ಯಪ್ ಗುಂಪು ರಚಿಸುವ ಮೂಲಕ ಮಕ್ಕಳ ಚಟುವಟಿಕೆಗಳ ಕುರಿತು ಪಾಲಕರಿಗೆ ನಿರಂತರ ಮಾಹಿತಿ ನೀಡಬೇಕು, ಭವಿಷ್ಯದಲ್ಲಿ ಮಗುವಿನ ಕಲಿಕೆ ಸುಗಮವಾಗುವ ರೀತಿಯಲ್ಲಿ ಮಕ್ಕಳಲ್ಲಿ ಉತ್ತಮ ತಳಪಾಯ ಹಾಕುವ ಮೂಲಕ ಶಾಲಾ ಪೂರ್ವ ಶಿಕ್ಷಣ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು’ ಎಂದು ಕಾರ್ಯಕರ್ತೆಯರಿಗೆ ಹೇಳಿದರು.
ಮೇಲ್ವಿಚಾರಕಿಯರಾದ ನಾಗಮ್ಮ, ಲಕ್ಷ್ಮೀಬಾಯಿ, ನೀಲಮ್ಮ, ಮುಖ್ಯ ಶಿಕ್ಷಕಿ ಶಾಹೀನಾ ಬೇಗಂ, ಶಿಕ್ಷಕಿ ಅಲೀಮಾ ಬೇಗಂ, ಕಾರ್ಯಕರ್ತೆಯರಾದ ತಾಯಮ್ಮ, ಸುರೇಖಾ, ಚಂದ್ರಕಲಾ, ಗಿರಿಜಾ, ಮಲ್ಲಮ್ಮ ಮತ್ತು ವಿಜಯಲಕ್ಷ್ಮೀ ಇದ್ದರು.