ಶಕ್ತಿನಗರ: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ದಯಾನಂದ ಆಂಗ್ಲೋ ವೇದಿಕೆಯ (ಡಿಎವಿ ಪಬ್ಲಿಕ್ ಸ್ಕೂಲ್) ಶಾಲೆಯಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಶುಕ್ರವಾರ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಂಭ್ರಮದಿಂದ ಆಚರಿಸಿದರು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಶಾಲೆಯ ಆವರಣದಲ್ಲಿ ತಳಿರು ತೋರಣ ಹಾಗೂ ಗಾಳಿಪಟಗಳನ್ನು ಕಟ್ಟಲಾಗಿತ್ತು. ಮಕ್ಕಳು ವಿವಿಧ ವೇಷಭೂಷಣಗಳನ್ನು ಧರಿಸಿ ಗಮನ ಸೆಳೆದರು. ನಂತರ ಕಲಾಕೃತಿಗಳನ್ನು ಬಿಡಿಸಿ ಬಣ್ಣ ತುಂಬಿ ಸಿಂಗರಿಸಿದ್ದರು.
ರಂಗೋಲಿಯ ಮಧ್ಯದಲ್ಲಿ ಮಡಿಕೆಯಲ್ಲಿ ಅಕ್ಕಿ ತುಂಬಿ, ಅದರಲ್ಲಿ ಬೆಲ್ಲ ಇಟ್ಟು, ಅದರ ಸುತ್ತಲೂ ಕಬ್ಬಿನ ದಂಟುಗಳನ್ನಿಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಎತ್ತುಗಳು ಮತ್ತು ರೈತರ ವೇಷಭೂಷಣಗಳನ್ನು ಧರಿಸಿದ ಮಕ್ಕಳು ಗಮನಸೆಳೆದರು.
ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಪು ಧರಿಸಿದ್ದರು. ಇದೇ ಸಂದರ್ಭದಲ್ಲಿ ಶಿಕ್ಷಕರು ಹಾಡುಗಳನ್ನು ಹಾಡುತ್ತಾ, ಮಕರ ಸಂಕ್ರಾಂತಿ ಹಬ್ಬ ಆಚರಿಸಿದರು.
ದಯಾನಂದ ಆಂಗ್ಲೋ ವೇದಿಕೆಯ (ಡಿಎವಿ ಪಬ್ಲಿಕ್ ಸ್ಕೂಲ್) ಶಾಲೆಯ ಪ್ರಾಂಶುಪಾಲ ವಿ.ಕೆ.ಅಂಗಡಿ ಮಾತನಾಡಿ, ಸಂಕ್ರಾಂತಿ ಹಬ್ಬಗಳ ಮಹತ್ವ ಕುರಿತು ಮಕ್ಕಳಿಗೆ ಅರಿವು ಮೂಡಿಸಿದರು. ಎಲ್ಲರನ್ನು ಒಗ್ಗೂಡಿಸುವ ಸಾಮರಸ್ಯ ಹಬ್ಬಗಳು ಹೊಂದಿದೆ ಎಂದರು.