ತೋರಣದಿನ್ನಿ (ಕವಿತಾಳ): ‘ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸುವ ಕೆಲಸ ಮಾಡಲಾಗುವುದು’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮರೇಶ ಹೇಳಿದರು.
ಮಸ್ಕಿ ತಾಲ್ಲೂಕಿನ ತೋರಣದಿನ್ನಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ಗ್ರಾಮಭೆಯಲ್ಲಿ ಮಾತನಾಡಿ,‘ಈ ಸಂಬಂಧ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳುತ್ತದೆ’ ಎಂದರು.
ಶಿಕ್ಷಕ ರವಿಚಂದ್ರ ಮಾತನಾಡಿ,‘ಮಕ್ಕಳ ಹಕ್ಕುಗಳ ರಕ್ಷಣೆಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದೆ. ಮಕ್ಕಳ ಸಹಾಯವಾಣಿಗೆ ಕರೆ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು’ ಎಂದರು.
ವಿದ್ಯಾರ್ಥಿ ಪ್ರತಿನಿಧಿ ಸುರೇಶ ಮಾತನಾಡಿ,‘ತೊರಣದಿನ್ನಿ ಪ್ರೌಢಶಾಲೆಗೆ ರಸ್ತೆ ನಿರ್ಮಿಸಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸುತ್ತಮುತ್ತಲಿನ ಜಮೀನುಗಳ ರೈತರು ಮತ್ತು ಸಾರ್ವಜನಿಕರು ಶಾಲಾ ಆವರಣದ ಮೂಲಕ ಹೊಲಗಳಿಗೆ ತೆರಳುತ್ತಾರೆ. ಅಲ್ಲದೆ, ದ್ವಿಚಕ್ರ ವಾಹನಗಳನ್ನು ಶಾಲಾ ಆವರಣದಲ್ಲಿ ನಿಲ್ಲಿಸಲಾಗುತ್ತಿದೆ. ಇದರಿಂದ ತೊಂದರೆಯಾಗುತ್ತಿದೆ. ಅದನ್ನು ತಡೆಯಬೇಕು’ ಎಂದು ಮನವಿ ಮಾಡಿದರು.
ಶುದ್ಧ ಕುಡಿಯುವ ನೀರು, ಆಟದ ಮೈದಾನ ಸೇರಿದಂತೆ ವಿವಿಧ ಸೌಕರ್ಯಗಳನ್ನು ಒದಗಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದಮ್ಮ ಜೋಸೆಫ್, ಅಂಗನವಾಡಿ ಮೇಲ್ವಿಚಾರಕಿ ಮಹಾಂತಮ್ಮ, ಮುಖ್ಯಶಿಕ್ಷಕ ಎಚ್.ಮಲ್ಲಪ್ಪ, ಶಿಕ್ಷಕರಾದ ಶ್ರೀಶೈಲ ಉಮದಿ, ಯಂಕಜ್ಜ ಮತ್ತು ವಿದ್ಯಾರ್ಥಿ ಪ್ರತಿನಿಧಿ ಕಾವೇರಿ ಮತ್ತಿತರರು ವೇದಿಕೆ ಮೇಲೆ ಇದ್ದರು.