ಮಸ್ಕಿ: ‘ಪರಸ್ಪರ ಸ್ನೇಹ ಹಾಗೂ ವಿಶ್ವಾಸದಿಂದ ಸಧೃಡ ಬದುಕು ಕಟ್ಟಲು ಸಾಧ್ಯ’ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ಪಟ್ಟಣದ ಭ್ರಮರಾಂಬಾ ದೇವಸ್ಥಾನದಲ್ಲಿ ಸೋಮವಾರ ನಡೆದ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,‘ಎಲ್ಲ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗುವವರೇ ನಿಜವಾದ ರೆಡ್ಡಿಗಳು’ ಎಂದು ಅವರು ಹೇಳಿದರು.
ಹೇಮರೆಡ್ಡಿ ಮಲ್ಲಮ್ಮನವರ ಆದರ್ಶಗಳನ್ನು ಮನೆ ಮನೆಗೂ ಮುಟ್ಟಿಸುವ ಕೆಲಸವಾಗಬೇಕು ಎಂದು ಹೇಳಿದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಅಪ್ಪಾಜಿಗೌಡ ಪಾಟೀಲ ಸೇರಿ ಹಲವು ಮುಖಂಡರು ಮಾತನಾಡಿದರು.
ವರರುದ್ರಮುನಿ ಸ್ವಾಮೀಜಿ, ಶಾಂತಮಲ್ಲ ಸ್ವಾಮೀಜಿ ಇದ್ದರು.
ರೆಡ್ಡಿ ಸಮಾಜದ ಅಧ್ಯಕ್ಷ ಅಯ್ಯಣ್ಣ ನಾಗರಬೆಂಚಿ, ದೇವಸ್ಥಾನ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕುಮಾರೆಪ್ಪ ಕಮತರ, ಅಧ್ಯಕ್ಷ ನಕ್ಕುಂದಿ ಶರಣೇಗೌಡ ಹಾಗೂ ಧರ್ಮನಗೌಡ ಇದ್ದರು.
ದೇವಸ್ಥಾನಕ್ಕೆ ಭೂಮಿ ಪೂಜೆ: ಇದಕ್ಕೂ ಮೊದಲು ಪಟ್ಟಣದ ಪರಾಪುರ ರಸ್ತೆಯ ವೀರೇಶ್ವರ ಬಡಾವಣೆಯಲ್ಲಿ ಸರ್ಕಾರದ ₹1 ಕೋಟಿ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಹೇಮರೆಡ್ಡಿ ಮಲ್ಲಮ್ಮರ ದೇವಸ್ಥಾನಕ್ಕೆ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಕುಮಾರೆಪ್ಪ ಕಮತರ ನೇತೃತ್ವದಲ್ಲಿ ಭೂಮಿ ಪೂಜೆ ನೆರವೇರಿಸಲಾಯಿತು.
ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ, ರೆಡ್ಡಿ ಸಮಾಜದ ಶಾಂತಮಲ್ಲ ಸ್ವಾಮೀಜಿ, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ, ಹಂಪನಗೌಡ ಬಾದರ್ಲಿ ಹಾಗೂ ಬಸನಗೌಡ ಬ್ಯಾಗವಾಟ್ ಇದ್ದರು.
ಮೆರವಣಿಗೆ: ಜಯಂತಿ ಅಂಗವಾಗಿ ಪಟ್ಟಣದಲ್ಲಿ ಸೋಮವಾರ ಹೇಮರೆಡ್ಡಿ ಮಲ್ಲಮ್ಮನವರ ಭಾವಚಿತ್ರದ ಮೆರವಣಿಗೆ ನಡೆಯಿತು.
ಭ್ರಮರಾಂಬಾ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ವಿವಿಧ ರಸ್ತೆಗಳಲ್ಲಿ ಸಂಚರಿಸಿತು. ಜಾನಪದ ಕಲಾ ತಂಡಗಳು ಗಮನ ಸೆಳೆದವು.
ವಿಧಾನ ಪರಿಷತ್ ಸದಸ್ಯ ಶರಣಗೌಡ ಪಾಟೀಲ ಬಯ್ಯಾಪುರ ಸೇರಿ ಹಲವರು ಇದ್ದರು.