ಸರ್ಕಾರ ಕೊಟ್ಯಂತರ ರೂಪಾಯಿ ಖರ್ಚು ಮಾಡಿ ಗ್ರಾಮೀಣ ಭಾಗದ ಹಳ್ಳಿ, ಪಟ್ಟಣಗಳಲ್ಲಿ ಸಾರ್ವಜನಿಕ ಗ್ರಂಥಾಲಯ ನಿರ್ಮಿಸುತ್ತಿದೆ. ಆದರೆ, ಆ ಗ್ರಂಥಾಲಯಗಳು ಸರಿಯಾದ ಮೂಲ ಸೌಕರ್ಯಗಳು ಇಲ್ಲದೇ ಮುಚ್ಚಿವೆ.
ಆದರೆ, ಪಟ್ಟಣದ ಮಲ್ಲಿಕಾರ್ಜುನ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಡಿಯಲ್ಲಿ ನಡೆಯುತ್ತಿರುವ ಬಯ್ಯಾಪುರ ಮಹಾಂತಮ್ಮ ಲಿಂಗನಗೌಡ ಸ್ಮಾರಕ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವ್ಯವಸ್ಥಿತವಾಗಿ ಗ್ರಂಥಾಲಯ ಸ್ಥಾಪಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೊಸ ವರ್ಷವನ್ನು ಬಹುತೇಕ ಶಾಲೆಗಳಲ್ಲಿ ಕೇಕ್ ಕಟ್ ಮಾಡುವ ಮೂಲಕ ಆಚರಿಸಲಾಗುತ್ತಿದೆ. ಆದರೆ, ಬಯ್ಯಾಪುರ ಮಹಾಂತಮ್ಮ ಲಿಂಗನಗೌಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹೊಸ ವರ್ಷವನ್ನು ಪುಸ್ತಕ ಸಂಗ್ರಹ ಮಾಡಿ ಗ್ರಂಥಾಲಯ ಸ್ಥಾಪಿಸುವ ಮೂಲಕ ಆಚರಿಸಿತು.
ಶಾಲೆಯ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯಲ್ಲಿ ಇದ್ದ ಪುಸ್ತಕಗಳ ಸಂಗ್ರಹದ ಜೊತೆಗೆ ಅಕ್ಕ ಪಕ್ಕದ ಮನೆಗಳಲ್ಲಿ ಮೊಲೆಗುಂಪಾಗಿದ್ದ ನೂರಾರು ಪುಸ್ತಕಗಳನ್ನು ಮನೆಯವರಿಂದ ದೇಣಿಗೆ ಪಡೆದು ಶಾಲಾ ಗ್ರಂಥಾಲಯ ಸ್ಥಾಪಿಸಿದ್ದಾರೆ.
ಒಂದೇ ದಿನದಲ್ಲಿ ₹ 20 ಸಾವಿರ ಬೆಲೆಯ 800 ಪುಸ್ತಕಗಳನ್ನು ವಿದ್ಯಾರ್ಥಿಗಳು ಸಂಗ್ರಹಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಮಕ್ಕಳ ಪುಸ್ತಕ ಆಸಕ್ತಿ ಅರಿತ ಪಾಲಕರೊಬ್ಬರು ₹ 10 ಸಾವಿರ ಬೆಲೆಯ ಪುಸ್ತಕ ಇಡುವ ಆಲ್ಮೇರವನ್ನು ದೇಣಿಗೆಯಾಗಿ ನೀಡಿದ್ದರೆ. ಜೋಗಿನ್ ರಾಮಣ್ಣ ಸ್ಮಾರಕ ಪ್ರೌಢ ಶಾಲೆಯ ಶಿಕ್ಷಕರು ₹ 10 ಸಾವಿರಗಳನ್ನು ಗ್ರಂಥಾಲಯದ ಇತರೆ ಖರ್ಚುಗಳಿಗೆ ನೀಡಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕ ಮೌನೇಶ ಹೊಸಮನಿ ತಿಳಿಸಿದ್ದಾರೆ.