ರಾಯಚೂರು: ಬದುಕಿಗೆ ತಾಂತ್ರಿಕತೆ ಹಾಗೂ ಯಾಂತ್ರಿಕತೆ ಅವಶ್ಯಕವಾಗಿದೆ. ಆದರೆ, ಬದುಕು ಯಾಂತ್ರಿಕ ಆಗಬಾರದು ಎಂದು ಯುವ ಸ್ಪಂದನ ಕೇಂದ್ರದ ಕ್ಷೇತ್ರ ಸಂಪರ್ಕಾಧಿಕಾರಿ ಸುನೀಲ ಹೇಳಿದರು.
ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸ್ಪಂದನ ಕೇಂದ್ರ, ಜ್ಞಾನಗಂಗಾ ಪದವಿಪೂರ್ವ ಕಾಲೇಜು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಯುವ ಅಭಿವೃದ್ದಿ ಸಂಘದಿಂದ ಆಯೋಜಿಸಿದ್ದ ಯುವ ಸ್ಪಂದನ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸುತ್ತಮುತ್ತಲಿನ ಪರಿಸರದಲ್ಲಿನ ಶಾಲೆ, ಸಮುದಾಯ ಹಾಗೂ ಧಾರ್ಮಿಕ ವಿಚಾರಗಳನ್ನು ಸಾಂಸ್ಕೃತಿಕ ತಾಣಗಳಾಗಿಸಿಕೊಳ್ಳಬೇಕು. ಸಾಮಾಜಿಕ ಒಡನಾಟವೂ ಉತ್ತಮ ಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ನಿರಾಶದಾಯಕ ಬದುಕು ಸಾಗಿಸಬೇಕಾಗುತ್ತದೆ ಎಂದರು.
ಟಿ.ರಾಮಯ್ಯ ನಾಯಕ ಮಾತನಾಡಿ, ದೈಹಿಕ ಹಾಗೂ ಮಾನಸಿಕವಾಗಿ ಯುವಕರು ಸದೃಢರಾಗಬೇಕು. ಯುವ ಸ್ಪಂದನ ಕಚೇರಿ ಭೇಟಿ ನೀಡಿ ಇಲಾಖೆಯ ಸಹಕಾರ ಪಡೆದು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜ್ಞಾನಗಂಗಾ ಕಾಲೇಜ್ ಸಂಸ್ಥಾಪಕ ನರಸಪ್ಪ ಮಾತನಾಡಿ, ಕಾಡಿನಲ್ಲಿ ಪ್ರಯಾಣಿಸುವಾಗ ಅಥವಾ ಪರಿಚಯವಿಲ್ಲದ ಪಟ್ಟಣದಲ್ಲಿ ಸಂಚರಿಸವಾಗ ದಿಕ್ಸೂಚಿ ಅವಶ್ಯಕತೆಯಿರುವಂತೆ ಸಾರ್ಥಕ ಜೀವನಕ್ಕೆ ಗುರಿಯು ದಿಕ್ಸೂಚಿಯಾಗಿದೆ ಎಂದು ಹೇಳಿದರು.
ಪಾಚಾರ್ಯ ರಾಜಾ ಶ್ರೀನಿವಾಸ, ಮಲ್ಲಿಕಾರ್ಜುನ, ಬಸವರಾಜ, ಮುತ್ತುರಾಜ, ತಿರುಮಲೇಶ, ಮುತ್ತಣ್ಣ, ಗಂಗಾಧರ ಇದ್ದರು.