ರಾಯಚೂರು: ಪಿರಾಮಿಡ್ ಸ್ಪಿರಿಚ್ಯುವೆಲ್ ಸೊಸೈಟಿ ಮೂವ್ಮೆಂಟ್ ಜಿಲ್ಲಾ ಘಟಕದಿಂದ ಸೆಪ್ಟೆಂಬರ್ 3ರಂದು ಸಂಜೆ 5ಗಂಟೆಗೆ ಮಹಿಳಾ ಧ್ಯಾನ ಯಜ್ಞ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಆಯೋಜಕ ಕೋಟೇಶ್ವರರಾವ್ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮೂವ್ಮೆಂಟ್ನ ಸಂಸ್ಥಾಪಕ ಬ್ರಹ್ಮರ್ಷಿ ಪಿತಾಮಹ ಪತ್ರೀಜಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸಂಜೆ 5 ಗಂಟೆಯಿಂದ 6ರವರೆಗೆ ಸಾಮೂಹಿಕ ಧ್ಯಾನ ಕಾರ್ಯಕ್ರಮ ನಡೆಯಲಿದ್ದು, ಅನುಭವಿಗಳಿಂದ ಅಭಿಪ್ರಾಯ ಹಂಚಿಕೆ ಹಾಗೂ ಪತ್ರೀಜಿ ಅವರು ಸಂದೇಶ ನೀಡಲಿದ್ದಾರೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಮಾರಂ ಹೇಮಾ ನಾರಾಯಣ ಮಾತನಾಡಿ, ಮಹಿಳೆಯರನ್ನು ಧ್ಯಾನ ಯೋಗಿಗಳನ್ನಾಗಿ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಧ್ಯಾನದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಿದ್ದು, ಹೆಚ್ಚಿನ ಸಂಖ್ಯೆಯ ಜನರು ಪ್ರಯೋಜನ ಪಡೆಯಬೇಕು ಎಂದು ಹೇಳಿದರು.
ಚೂಡಿ ಲಾವಣ್ಯ, ನರಸಪ್ಪ, ಮಾರಂ ನಾರಾಯಣ ಪತ್ರಿಕಾಗೋಷ್ಠಿಯಲ್ಲಿ ಇದ್ದರು.