ಶಕ್ತಿನಗರ (ರಾಯಚೂರು): ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್ಟಿಪಿಎಸ್) ಒಂದನೇ ಘಟಕದಲ್ಲಿ ಕಲ್ಲಿದ್ದಲು ಸಾಗಿಸುವ ಬೆಲ್ಟ್ಗೆಸಿಲುಕಿ ಗುತ್ತಿಗೆ ಕಾರ್ಮಿಕ ದೀಪಕ ನಾಯಕ (27) ಮೃತಪಟ್ಟಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಒಡಿಸಾ ರಾಜ್ಯದ ಅಂಗೋಲ ಜಿಲ್ಲೆಯ ಬನವಾಲ್ ಪತ್ ಗ್ರಾಮದ ಯುವಕ, ಕಲ್ಲಿದ್ದಲು ವಿಭಾಗದ 1 ರಲ್ಲಿ ಕಲ್ಲಿದ್ದಲು ಪೂರೈಕೆ ಮಾಡುವ ಬೆಲ್ಟ್ನಲ್ಲಿಕಾರ್ಯನಿರ್ವಹಿಸುತ್ತಿದ್ದರು. ಬೆಲ್ಟ್ನಲ್ಲಿಕಂಡುಬಂದ ಕಲ್ಲನ್ನು ತುಂಡರಿಸಲು ಪ್ರಯತ್ನಿಸುವಾಗ ಆಯತಪ್ಪಿ ಬೆಲ್ಟ್ ಮೇಲೆ ಬಿದ್ದಿದ್ದಾರೆ.
ಕೂಡಲೇ ಇನ್ನೊಬ್ಬ ಉದ್ಯೋಗಿ ಗಮನಿಸಿ, ನೆರವಿಗೆ ಧಾವಿಸಿದರೂ ದೀಪಕ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.ಕಲ್ಲಿದ್ದಲು ಪುಡಿ ಮಾಡುವ ಬಂಕರ್ನಲ್ಲಿ ಸಿಲುಕಿದ್ದರಿಂದ ದೇಹ ಛಿದ್ರವಾಗಿದೆ.ಕಲ್ಲಿದ್ದಲು ಬೆಲ್ಟ್ ಗೆ ಸಿಲುಕಿ ತುಂಡಾಗಿರುವ ದೀಪಕ್ ಶವವನ್ನು ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಈ ವಿಷಯ ತಿಳಿದು ಆರ್ಟಿಪಿಎಸ್ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಸಿ.ವೇಣುಗೋಪಾಲ, ಕಲ್ಲಿದ್ದಲು ವಿಭಾಗದ ಮುಖ್ಯ ಎಂಜಿನಿಯರ್ ಜಿ.ಹನುಮಂತಪ್ಪ, ಚಾಲನೆ ಮತ್ತು ನಿರ್ವಹಣೆ ವಿಭಾಗದ ಮುಖ್ಯ ಎಂಜಿನಿಯರ್ ವೆಂಕಟಾಚಲಾಪತಿ, ಸುರಕ್ಷತಾ ವಿಭಾಗದ ಅಧಿಕಾರಿ ಯಲ್ಲಪ್ಪ ಶೆಟ್ಟಿ, ಕೇಂದ್ರ ಭದ್ರತಾ ಪಡೆಯ ಕಮಾಂಡೆಂಟ್ ಅಶು ಸಿಂಗಲ್ ಅವರು ಸ್ಥಳಕ್ಕೆ ಧಾವಿಸಿದರು.
ಶಕ್ತಿನಗರ ಠಾಣೆಯ ಪಿಎಸ್ಐ ರಾಮಚಂದ್ರಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಡಿಯೋ ವೈರಲ್:ದೀಪಕ ನಾಯಕ ಬೆಲ್ಟ್ ಮೇಲೆ ಆಯತಪ್ಪಿ ಬಿದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ವಿಡಿಯೊ ತುಣುಕೊಂದು ವೈರಲ್ ಆಗಿದೆ.
ಮೃತ ಕಾರ್ಮಿಕ ಕುಟುಂಬಕ್ಕೆ ಪರಿಹಾರವಿಲ್ಲ
ಒಡಿಶಾ ಹಾಗೂ ಪಶ್ಚಿಮ ಬಂಗಾಳ ಕಡೆಗಳಿಂದ ಕಾರ್ಮಿಕರನ್ನುಗುತ್ತಿಗೆಗಾರರು ಕರೆತಂದಿದ್ದು, ಆರ್ ಟಿಪಿಎಸ್ ಆವರಣದಲ್ಲಿಯೇಉಳಿದುಕೊಳ್ಳಲು ತಾತ್ಕಾಲಿಕ ಶೆಡ್ಗಳಲ್ಲಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಕುಟುಂಬಗಳನ್ನು ತೊರೆದು ಕೆಲಸ ಮಾಡುವುದಕ್ಕಾಗಿಯೇ ಬಂದಿರುವ ನೂರಾರು ಕಾರ್ಮಿಕರು ವಿದ್ಯುತ್ ಸ್ಥಾವರದಲ್ಲಿ ಇದ್ದಾರೆ.
‘ಹೊರ ಗುತ್ತಿಗೆ ಕಾರ್ಮಿಕರಿಗೆ ಗುತ್ತಿಗೆದಾರರೆ ವಿಮೆ ಮಾಡಿಸಿರುತ್ತಾರೆ. ಕಂಪೆನಿಯಿಂದ ಯಾವುದೇ ಪರಿಹಾರ ನೀಡುವುದಕ್ಕೆ ಅವಕಾಶವಿಲ್ಲ’ಎಂದು ಆರ್ ಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕ ವೇಣುಗೋಪಾಲ 'ಪ್ರಜಾವಾಣಿ'ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.