ರಾಯಚೂರು: ಆಹಾರ ಸಾಮಗ್ರಿಗಳನ್ನು ರಫ್ತು ಹಾಗೂ ಆಮದು ಮಾಡಿಕೊಳ್ಳುವ ಉದ್ದೇಶಕ್ಕಾಗಿ 10 ದೇಶಗಳನ್ನು ಒಳಗೊಂಡ ಅಶಿಯಾನ್ ಚೇಂಬರ್ ಆಫ್ ಕಾಮರ್ಸ್ನಿಂದ ಬೆಂಗಳೂರಿನಲ್ಲಿ ಶಾಖೆಯೊಂದನ್ನು ತೆರೆಯಲಾಗಿದ್ದು, ಇದರಿಂದ ಈ ಭಾಗದ ಸೋನಾ ಮಸೂರಿ ಅಕ್ಕಿ ರಫ್ತು ಮಾಡಲು ಅನುಕೂಲವಾಗಲಿದೆ ಎಂದು ರಾಯಚೂರು ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಶಿ ಹೇಳಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಶಿಯಾನ್ ಆಹ್ವಾನವನ್ನು ಮನ್ನಿಸಿ ಬೆಂಗಳೂರಿನ ಫಿಕ್ಕಿಯಿಂದ ಕಳೆದ ಫೆಬ್ರುವರಿಯಲ್ಲಿ ನಿಯೋಗ ಹೋಗಲಾಗಿತ್ತು. ಅದರಲ್ಲಿ ನಾನು ಕೂಡಾ ಭೇಟಿ ನೀಡಿ ಮಾಹಿತಿ ಪಡೆದಿದ್ದೇನೆ. ಅಶಿಯಾನ್ದಲ್ಲಿ ಭಾರತವು ಮಾಹಿತಿ ವಿನಿಮಯ ರಾಷ್ಟ್ರವಾಗಿ ಮಾತ್ರ ಪಾಲುದಾರಿಕೆ ಪಡೆದಿದೆ. ವ್ಯಾಪಾರದ ಒಪ್ಪಂದ ಮಾಡಿಕೊಂಡಿಲ್ಲ’ ಎಂದರು.
ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದರಿಂದ ಮಲೇಷ್ಯಾ ಸೇರಿದಂತೆ ಏಷಿಯಾದ ವಿವಿಧ ರಾಷ್ಟ್ರಗಳಿಗೆ ಈ ಭಾಗದಿಂದ ರಫ್ತು ವ್ಯಾಪಾರ ಆರಂಭಿಸಲು ಅನುಕೂಲವಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಈಗಾಗಲೇ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಮಲ್ಲಿಕಾರ್ಜುನ ದೋತರಬಂಡಿ, ಗೌರವ ಕಾರ್ಯದರ್ಶಿ ಜಂಬಣ್ಣ, ಮಲ್ಲಿಕಾರ್ಜುನ, ಜಗದೀಶ ಪತ್ರಿಕಾಗೋಷ್ಠಿಯಲ್ಲಿ ಇದ್ದರು.