ರಾಯಚೂರು: ‘ ಪಂಚಾಕ್ಷರಿ ಗವಾಯಿ ಅವರು ಅಜ್ಞಾನ, ಅಂಧಕಾರ, ಮೌಢ್ಯದ ಬಗ್ಗೆ ಜಾಗೃತಿ ಮೂಡಿದ್ದರು‘ ಎಂದು ಗದಗ ಜಿಲ್ಲೆಯ ಗಾನಯೋಗಿ ಪಂಚಾಕ್ಷರಿ ಗವಾಯಿ ಅವರ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜ ಹೇಳಿದರು.
ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಪಂಚಾಕ್ಷರಿ ಗವಾಯಿ ಸಾಂಸ್ಕೃತಿಕ ಸಂಸ್ಥೆಯಿಂದ ಆಯೋಜಿಸಲಾಗಿದ್ದ ಪಂಚಾಕ್ಷರಿ ಗವಾಯಿ ಅವರ ಪುಣ್ಯ ಸ್ಮರಣೆ ಹಾಗೂ 41ನೇ ವರ್ಷದ ಸಂಗೀತ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಪುಟ್ಟರಾಜು ಗವಾಯಿ ಅವರ ನೆನಪಿನಲ್ಲಿ ಸಂಸ್ಥೆಯಿಂದ ಸಂಗೀತ ಸೇವೆ ನಡೆಸುತ್ತಿದ್ದು ಶ್ಲಾಘನೀಯ. ಕಲಾವಿದರಿಗೆ ನೆರವು ಅಗತ್ಯವಾಗಿದೆ. ಕಲೆ ಹಾಗೂ ಕಲಾವಿದರನ್ನು ಬೆಳೆಸುವ ಕೈಗಳು ಹೆಚ್ಚಾಗಬೇಕು ಎಂದರು.
ಸಂಸದ ರಾಜಾ ಅಮರೇಶ್ವರ ಮಾತನಾಡಿ, ಸಂಗೀತ ಹಾಗೂ ಶಿಕ್ಷಣ ಸೇವೆ ಮುಖ್ಯವಾದುದು. ಎರಡು ಕ್ಷೇತ್ರಗಳಿಗೆ ಅಗತ್ಯ ಸಹಕಾರ ಸಿಗುವಂತಾಗಬೇಕು. ಸರ್ಕಾರದಿಂದ ಸಿಗುವ ಎಲ್ಲಾ ಸೌಕರ್ಯವನ್ನು ಒದಗಿ ಸಲು ಪ್ರಯತ್ನಿಸಲಾಗುವುದು ಎಂದರು.
ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿ, ಸೋಮವಾರಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಮಹಾಸ್ವಾಮಿ, ಗಬ್ಬೂರಿನ ಬೂದಿ ಬಸವೇಶ್ವರ ಸಂಸ್ಥಾನ ಮಠದ ಬೂದಿ ಬಸವೇಶ್ವರ ಶಿವಾಚಾರ್ಯ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು.
ಕಾಂಗ್ರೆಸ್ ಮುಖಂಡ ರವಿ ಬೋಸರಾಜು, ವನಜಾಕ್ಷಿ ಎನ್., ಪಂಚಾಕ್ಷರಿ ಗವಾಯಿ ಸಾಂಸ್ಕೃತಿಕ ಸಂಸ್ಥೆಯ ಗೌರವಾಧ್ಯಕ್ಷ ನರಸಿಂಹಲು ವಡವಾಟಿ, ಅಧ್ಯಕ್ಷ ಸುಗುರೇಶ ಅಸ್ಕಿಹಾಳ, ಉಪಾಧ್ಯಕ್ಷ ಸೂಗೂರಯ್ಯಸ್ವಾಮಿ ಹೊಸೂರು, ಸುಧಾಕರ ಅಸ್ಕಿಹಾಳ, ಇಬ್ರಾಹೀಂ, ವೆಂಕಟೇಶ ಆಲ್ಕೋಡ್ ಇದ್ದರು.