ರಾಯಚೂರು: ‘ನಗರ ಸಂಸ್ಥೆಗಳಿಂದ ಹಿಡಿದು ಸಂಸತ್ವರೆ ಎಲ್ಲಿಯೂ ಮುಸಲ್ಮಾನರು ಎದುರಿಸುವ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಚರ್ಚಿಸುತ್ತಿಲ್ಲ. ಒಂದು ದಶಕದಿಂದ ಶೋಚನೀಯ ಸ್ಥಿತಿ ಬಂದಿದೆ’ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಘಟಕದ ಉಪಾಧ್ಯಕ್ಷ ರಝಾಕ್ ಉಸ್ತಾದ್ ಹೇಳಿದರು.
ನಗರದ ಅತ್ತನೂರು ಪಂಕ್ಷನ್ ಹಾಲ್ನದಲ್ಲಿ ಅಂಜುಮನ್ ಎ ರಾಯಚೂರಿನಿಂದ ಭಾನುವಾರ ಆಯೋಜಿಸಿದ್ದ ‘ಕರ್ನಾಟಕದಲ್ಲಿ ಮುಸ್ಲಿಮರ ಸ್ಥಿತಿಗತಿ’ ಕುರಿತ ಸಮಾವೇಶದಲ್ಲಿ ಮಾತನಾಡಿದರು.
‘ಪೊಲೀಸ್ ಇಲಾಖೆಯೂ ಸೇರಿದಂತೆ ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರ ಸಂಖ್ಯೆ ಗಣನೀಯ ಕಡಿಮೆ ಆಗಿದೆ. ಭಾರತವು 800 ವರ್ಷ ಪರಕೀಯರ ಆಳ್ವಿಕೆಗೆ ಒಳಪಟ್ಟರೂ ಜಾತ್ಯಾತೀತ ದೇಶವಾಗಿ ಉಳಿದಿದೆ. ಆದರೆ, ಇತ್ತೀಚೆಗೆ ಮುಸ್ಲಿಂ ಜನಪ್ರತಿನಿಧಿಗಳನ್ನು ಆಯ್ಕೆ ಮಾಡದಿರುವುದು ಶೋಚನೀಯ ಸಂಗತಿ’ ಎಂದರು.
ರಾಜ್ಯದ ವಿಧಾನಸಭೆಯಲ್ಲಿ ಮುಸ್ಲಿಂ ಶಾಸಕರ ಸಂಖ್ಯೆ ಕಡಿಮೆ ಇರುವುದರಿಂದ, ಅನುದಾನಹಂಚಿಕೆ ಕಡಿಮೆ ಆಗುತ್ತಿದೆ. ಬಹಳಷ್ಟು ಯೋಜನೆಗಳು ಸ್ಥಗಿತವಾಗುತ್ತಿವೆ. ಕನಿಷ್ಠ ಜಾತ್ಯತೀತ ಎಂದು ಪ್ರಚಾರ ಮಾಡುವ ಶಾಸಕರು ಕೂಡಾ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಮುಸ್ಲಿಮರ ಸಮಸ್ಯೆ ಮುಸ್ಲಿಂ ಜನಪ್ರತಿನಿಧಿಗಳೇ ಎತ್ತಬೇಕು ಎನ್ನುವ ಸ್ಥಿತಿಇದೆ ಎಂದು ಹೇಳಿದರು.
ರಾಯಚೂರು ಜಿಲ್ಲಾ ಪಂಚಾಯಿತಿ ಹಾಗೂ ರಾಯಚೂರು ನಗರಸಭೆಯಲ್ಲಿ ದಶಕದ ಹಿಂದೆ ಸಾಕಷ್ಟು ಮುಸ್ಲಿಂ ಜನಪ್ರತಿನಿಧಿಗಳಿದ್ದರು. ಮುಸ್ಲಿಮರನ್ನು ರಾಜಕೀಯ ತುಳಿಯುವ ಪಿತೂರಿ ನಡೆಯುತ್ತಿದೆ. ರಾಯಚೂರು ನಗರದಲ್ಲಿ ನಿಯಮಾನುಸಾರ ಮತಗಟ್ಟೆಗಳನ್ನು ಮಾಡುತ್ತಿಲ್ಲ. ಒಂದು ಬಡಾವಣೆಯಿಂದ ಇನ್ನೊಂದು ಬಡಾವಣೆಯ ಮತಗಟ್ಟೆಗೆ ಹೋಗಿ ಮತದಾನ ಮಾಡಬೇಕಾಗಿದ್ದರಿಂದ, ಮತ ಚಲಾಯಿಸುವುದು ಕಡಿಮೆ ಆಗುತ್ತಿದೆ. ಇದರಲ್ಲಿ ವ್ಯವಸ್ಥಿತ ಸಂಚು ಇದೆ ಎಂದು ತಿಳಿಸಿದರು.