ಜಾಲಹಳ್ಳಿ: ತಾಲ್ಲೂಕು ಕೇಂದ್ರದಿಂದ 24 ಕಿ.ಮೀ ದೂರು ಇರುವ ಮ್ಯಾಲಕದೊಡ್ಡಿ ಎಂಬ ಚಿಕ್ಕ ಗ್ರಾಮವು ಮೂಲ ಸೌಲಭ್ಯಗಳಿಂದ ವಂಚಿತವಾಗಿದೆ.
ಕಮಲದಿನ್ನಿ ಕ್ರಾಸ್–ಮ್ಯಾಲಕದೊಡ್ಡಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯುದ್ದಕ್ಕೂ ಗುಂಡಿ ಬಿದ್ದು ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಸಂಚಾರಕ್ಕೆ ತುಂಬಾ ಕಷ್ಟವಾಗಿದೆ. ಜನರು ನಿತ್ಯ ಈ ರಸ್ತೆಯಲ್ಲಿ ಸಂಚಾರಿಸಲು ಪ್ರಯಾಸಪಡುವಂತಾಗಿ ಗಾಣದಾಳ ಗ್ರಾಮದ ಮೂಲಕ ಹೋಗಬೇಕಿದೆ.
ಎರಡು ವರ್ಷದ ಹಿಂದೆ ಮ್ಯಾಲಕದೊಡ್ಡಿ ಗ್ರಾಮದಿಂದ ಜಾಲ ಹಳ್ಳಿಗೆ ಸಂರ್ಪಕಿಸುವ 5 ಕಿ.ಮೀ. ರಸ್ತೆ ನಿರ್ಮಿಸಬೇಕಿತ್ತು. ರಸ್ತೆ ದುರಸ್ತಿಗೆ ಪ್ರಧಾನ ಮಂತ್ರಿ ಸಡಕ್ ಯೋಜನೆಯಡಿ ₹ 2 ಕೋಟಿ ವೆಚ್ಚ ಮಾಡಿ ಅರ್ಧ ರಸ್ತೆ ಮಾತ್ರ ನಿರ್ಮಿಸಿ ಉಳಿದ ಕಾಮಗಾರಿ ಇಲ್ಲಿಯವರೆಗೆ ಪೂರ್ಣಗೊಳಿಸಿಲ್ಲ. ಉಳಿದ 3 ಕಿ.ಮೀ. ರಸ್ತೆಯಲ್ಲಿ ಗುಂಡಿಗಳು ಬಿದ್ದಿರು ವುದರಿಂದ ಯಾರೂ ಸಹ ಸುಗಮವಾಗಿ ಸಂಚರಿಸಲು ಆಗದಂತಹ ಪರಿಸ್ಥಿತಿ ಇದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಸೋಮನಮರಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಈ ಗ್ರಾಮದಲ್ಲಿ ಸುಮಾರು 1200 ಜನ ಸಂಖ್ಯೆ ಹೊಂದಿದ್ದು, 3 ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಇದೇ ಗ್ರಾಮದ ನಿವಾಸಿಯೇ ಗ್ರಾ.ಪಂ ಅಧ್ಯಕ್ಷೆಯಾಗಿದ್ದಾರೆ. ಗ್ರಾಮ ಸುತ್ತಲೂ ನಾರಾಯಣಪುರ ಬಲದಂಡೆ ಕಾಲುವೆಯ ಬಸಿ ನೀರು ಹರಿಯುತ್ತಿರುವುದರಿಂದ ಗ್ರಾಮದ ಪಕ್ಕದಲ್ಲಿರುವ ಜನತೆ ಗುಂಡಿಗಳನ್ನು ತೊಡಿ ತಿಪ್ಪೆಗುಂಡಿಗಳನ್ನು ಹಾಕಿದ್ದರೆ. ಸ್ವಚ್ಛತೆ ಇಲ್ಲದೇ ಸೊಳ್ಳೆಉತ್ಪತ್ತಿಯ ಕೇಂದ್ರವಾಗಿದ್ದು, ಜನರಿಗೆ ಸೊಳ್ಳೆಗಳ ಕಾಟದಿಂದ ಸಾಂಕ್ರಮಿಕ ರೋಗಗಳ ಭಯ ದಿಂದ ಜನತೆ ನೆಮ್ಮದಿಯಿಂದ ನಿದ್ದೆ ಕೂಡ ಮಾಡದಂತಹ ಸ್ಥಿತಿ ನಿರ್ಮಾಣ ವಾಗಿದೆ. ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ ಇರುವು ದರಿಂದ ಸಾರ್ವಜನಿಕರು ಸಂಚಾರಿಸುವ ರಸ್ತೆಗಳಲ್ಲಿ ಹೊಲಸು ನೀರು ನಿತ್ಯ ಹರಿಯುತ್ತಿದ್ದು, ಗ್ರಾಮದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ.
60ಕ್ಕೂ ಹೆಚ್ಚು ಕುಟುಂಬಗಳಲ್ಲಿ ವೈಯಕ್ತಿಕ ಶೌಚಾಲಯಗಳನ್ನು ಹೊಂದಿದ್ದು, ಉಳಿದ ಮನೆಗಳಲ್ಲಿ ನಿರ್ಮಿಸಿಕೊಳ್ಳಲು ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.ಇನ್ನೂ ಶಾಸಕರ ಕ್ಷೇತ್ರ ಅಭಿವೃದ್ಧಿ ಅನುದಾನದಲ್ಲಿ ಮ್ಯಾಲಕದೊಡ್ಡಿ–ಬಿ.ಆರ್ ಗುಂಡ ಗ್ರಾಮಕ್ಕೆ ಸಂಪರ್ಕಿಸಲು ರಸ್ತೆ ನಿರ್ಮಾಣಕ್ಕೆ ₹1ಕೋಟಿ ಮಂಜೂರಾಗಿದ್ದು, ಟೆಂಡರ್ ಕೂಡ ಅಗಿದೆ. ಈ
ರಸ್ತೆಯಿಂದ ಏನು ಪ್ರಯೋಜನವಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. 2016–17ನೇ ಸಾಲಿನ ಕೆಕೆಆರ್ಡಿಬಿ ಯೋಜನೆ ಅಡಿ ಮಹಿಳೆಯರಿಗೆ ₹10 ಲಕ್ಷ ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಿಸಲಾಗಿದೆ. ನೀರಿನ ವ್ಯವಸ್ಥೆ ಇಲ್ಲದೇ ಗಬ್ಬುನಾರುತ್ತಿದೆ. ಮಹಿಳೆರು ಅದನ್ನು ಬಳಕೆ ಮಾಡದೇ ಪಾಳುಬಿದ್ದಿದೆ.
2015–16ರಲ್ಲಿ ಕೆಕೆಆರ್ಡಿಬಿ ಉಪಯೋಜನೆ ಅಡಿ ₹15ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸಿ.ಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಯನ್ನು ಜನತೆ ಬಳಕೆ ಮಾಡಿಕೊಳ್ಳದೇ ಪಾಳುಬಿದ್ದಿದೆ.
2011–12ರಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಸುಮಾರು ₹25 ಲಕ್ಷ ವೆಚ್ಚದಲ್ಲಿ 50ಸಾವಿರ ಲೀಟರ್ ಸಂಗ್ರಹದ ಒವರ್ ಹೇಡ್ ಟ್ಯಾಂಕ್ ನಿರ್ಮಿಸಲಾಗಿದೆ. ಇಲ್ಲಿವರೆಗೆ ಪ್ರಾರಂಭಿ ಸಿಲ್ಲ ಒಂದು ಹನಿ ನೀರು ಸಹ ಸರಬರಾಜು ಮಾಡಿಲ್ಲ. ತಕ್ಷಣವೇ ಗ್ರಾಮದಲ್ಲಿರುವ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಬೇಕು.
ಇಲ್ಲಿ ಸಿಗುವ ನೀರಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಕೈ ಕಾಲು ನೋವು ಸಾಮಾನ್ಯ ಎಂಬುದು ಗ್ರಾಮಸ್ಥರ ಆರೋಪ. ಶುದ್ಧ ನೀರು ಬೇಕು ಎಂದು ಅವರು ಒತ್ತಾಯಿಸುತ್ತಾರೆ.,
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.