ರಾಯಚೂರು: ರಂಗಭೂಮಿಯು ಸಮುದಾಯದಲ್ಲಿ ಸಕಾರಾತ್ಮಕ ಸಂದೇಶಗಳನ್ನು ನೀಡುವ ಮೂಲಕ ಮನಸುಗಳನ್ನು ಬೆಸೆಯುವ ಕೆಲಸ ಮಾಡುತ್ತಿದೆ ಎಂದು ನಗರಸಭೆ ಸದಸ್ಯ ಜಯಣ್ಣ ಹೇಳಿದರು.
ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಮತ್ತು ಅಂಕಿತ ಡೆವಲಪಮೆಂಟ್ ಅರ್ಗನೈಜೇಷನ್ನಿಂದ ಆಯೋಜಿಸಿದ್ದ ಮೂರು ದಿನಗಳ ನಾಟಕೋತ್ಸವದ ಸಮಾರೋಪದಲ್ಲಿ ಮಂಗಳವಾರ ಮಾತನಾಡಿದರು.
ನಾಟಕ ಅಕಾಡೆಮಿಯು ರಾಯಚೂರಿಗೆ ರಾಜ್ಯದ ವಿವಿಧ ಭಾಗಗಳಿಂದ ನಾಟಕ ಸಂಸ್ಥೆಗಳನ್ನು ಕರೆಸಿ ಮೆಚ್ಚಿಸುವ ಕೆಲಸ ಮಾಡುತ್ತಿದೆ. ಭಾವನಾತ್ಮಕ ಮನಸುಗಳನ್ನು ಕಟ್ಟುವ ಕೆಲಸದಲ್ಲಿ ರಂಗಭೂಮಿಯ ಪಾತ್ರ ವಿಶೇಷವಾಗಿದೆ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಾ. ಸುಮ ಮಾತನಾಡಿ, ಕಲಾವಿದರು ಏನಾದರು ಹೊಸ ಪ್ರಯೋಗ ಮಾಡಬೇಕು. ಸಮಾಜಕ್ಕೆ ಹೊಸ ಸಂದೇಶವನ್ನು ಕೊಡಬೇಕು ಎನ್ನುವ ಹಂಬಲ ಇರುತ್ತದೆ. ಅದಕ್ಕೆ ರಂಗ ಕಲಾಭಿಮಾನಿಗಳ ಪ್ರೋತ್ಸಾಹ ಅಗತ್ಯ. ರಾಯಚೂರು ನಗರವು ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ ನಗರವಾಗಲಿ ಎಂದು ಆಶಿಸಿದರು.
ಕರ್ನಾಟಕ ನಾಟಕ ಸದಸ್ಯೆ ಶಾಂತಾ ಕುಲಕರ್ಣಿ ಮಾತನಾಡಿ, ರಂಗಭೂಮಿಯಲ್ಲಿ ಹೊಸ ಹೊಸ ಆವಿಷ್ಕಾರಗಳಾಗಿದ್ದು, ಇಲ್ಲಿಯೇ ಬೆಳೆದು ಚಿತ್ರನಟ ನಟಿಯರಾಗಿ ಬೆಳೆದಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರಿ ಪ್ರಾಂಶುಪಾಲ ಡಾ.ದಸ್ತಗೀರಸಾಬ್ ದಿನ್ನಿ ಮಾತನಾಡಿ, ರಂಗಭೂಮಿಯು ನಮ್ಮ ಸಂಸ್ಕೃತಿಯನ್ನು ಮತ್ತು ನಮ್ಮ ಸುತ್ತಮುತ್ತಲಿನ ಶಿಕ್ಷಣವನ್ನು ಬಿಂಬಿಸುವ ಕೆಲಸ ಮಾಡುತ್ತದೆ ಎಂದು ತಿಳಿಸಿದರು.
ರಂಗಭೂಮಿಗೆ ಸೇವೆ ಸಲ್ಲಿಸಿದ ಜಾಲಹಳ್ಳಿಯ ನಾಗಪ್ಪ ಬಾಳೆ, ಶಕ್ತಿನಗರದ ನಾಗಭೂಷಣ ಮತ್ತು ಸುಂದರೇಶ, ಅಸ್ಕಿಹಾಳದ ಸುಧಾಕರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಎಸ್ಡಬ್ಲುಸಿ ಅಧ್ಯಕ್ಷ ಡಿ.ಬಸವರಾಜ, ಆರ್ಟಿಪಿಎಸ್ ಸೌಹಾರ್ದ ಸಂಘದ ಅಧ್ಯಕ್ಷ ವೆಂಕಟೇಶ, ಬಿಟಿಯು ಅಧ್ಯಕ್ಷ ತಮ್ಮಣ್ಣ, ಹಣವೀರಯ್ಯ, ಕೌಶಿಕ ಇದ್ದರು.
ಎಂ. ಗಿರಿಯಪ್ಪ ಸ್ವಾಗತಿಸಿ ನಿರೂಪಿಸಿದರು. ಶಾಂಕಾ ಕುಲಕರ್ಣಿ ವಂದಿಸಿದರು.