ರಾಯಚೂರು:ರಂಗಭೂಮಿ ಚಟುವಟಿಕೆಗಳು ನಿರಂತರವಾಗಿ ನಡೆದಾಗ ಸಮಾಜವು ಆರೋಗ್ಯ ಪೂರ್ಣ ವಿಚಾರಗಳನ್ನು ಹೊಂದಿರುತ್ತದೆ ಎಂದು ನಗರಸಭೆ ವಾರ್ಡ್ ಸದಸ್ಯೆ ಲಕ್ಷ್ಮೀ ಅವರು ಹೇಳಿದರು.
ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ರಂಗಸಿರಿ ಸಾಂಸ್ಕೃತಿಕ ಕಲಾ ಬಳಗ ಮತ್ತು ನೀಸಾಸಂನಿಂದ ಈಚೆಗೆ ಏರ್ಪಡಿಸಿದ್ದ ‘ರಾಕ್ಷಸ ತಂಗಡಿ’ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜಗತ್ತು ಮುಳುಗಿದೆ. ಇಂಥ ಸಂದರ್ಭದಲ್ಲಿಯೂ ಹೆಗ್ಗೋಡದ ನೀನಾಸಂ ತಿರುಗಾಟ ತಂಡದಿಂದ ನಾಟಕೋತ್ಸವವನ್ನು ಆಯೋಜಿಸಿರುವುದು ಗಮನಾರ್ಹ ಕೆಲಸ ಎಂದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಗಣಪತಿ ಸಾಕ್ರೆ ಮಾತನಾಡಿ, ಕಲಾವಿದರ ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗುತ್ತಿಲ್ಲ. ಸಾರ್ವಜನಿಕರು ಈ ನಿಟ್ಟಿನಲ್ಲಿ ಯೋಚಿಸಿ ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ರಂಗಭೂಮಿ ಕಲಾವಿದ ಬಿ.ಎಚ್. ಗುಂಡಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಭಾವಸಾರ ಕ್ಷತ್ರೀಯ ಸಮಾಜದ ಶ್ರೀನಿವಾಸ ಪತಂಗಿ, ಶಿವಾನಂದ ಬಂಕೊಳ್ಳಿ, ಸಣ್ಣ ನರಸರೆಡ್ಡಿ, ಜಿ.ಮಹೇಂದ್ರರೆಡ್ಡಿ, ಅಶೋಕಗೌಡ ಇದ್ದರು.
‘ರಾಕ್ಷಸ ತಂಗಡಿ’ ಪ್ರದರ್ಶನವನ್ನು ನೋಡಿ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.