ರಾಯಚೂರು: ನೇತಾಜಿ ಸುಭಾಷ್ ಚಂದ್ರ ಭೋಸ್ ಅವರಲ್ಲಿದ್ದ ರಾಷ್ಟ್ರಪ್ರೇಮ, ಭಕ್ತಿ, ಶಿಸ್ತು, ಸಂಘಟನೆ, ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪ್ರತಿಯೊಬ್ಬರು ರಾಷ್ಟ್ರಸೇವೆ ಮಾಡಬೇಕು ಎಂದು ಭಾರತ ಸೇವಾದಳದ ವಿಭಾಗ ಸಂಘಟಕ ವಿದ್ಯಾಸಾಗರ ಚಿಣಮಗೇರಿ ಹೇಳಿದರು.
ತಾಲ್ಲೂಕಿನ ದಿನ್ನಿ ಶಾಲೆಯಲ್ಲಿ ನೆಹರು ಯುವ ಕೇಂದ್ರ, ಭಾರತ ಸೇವಾದಳ, ಡಾ.ಬಿ.ಆರ್. ಅಂಬೇಡ್ಕರ್ ಯುವ ಅಭಿವೃದ್ದಿ ಸಂಘ, ಭಾರತ ಸೇವಾದಳ, ನೇತಾಜಿ ಸುಭಾಷ್ ಚಂದ್ರಬೋಸ್ ಶಾಖೆ ದಿನ್ನಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತ ಸೇವಾದಳದ ತಾಲ್ಲೂಕು ಕಾರ್ಯದರ್ಶಿ ಮೆಹಬೂಬ್ ಮದ್ಲಾಪೂರು ವಿಶೇಷ ಉಪನ್ಯಾಸ ನೀಡಿ, ನೇತಾಜಿ ಅವರು ಇಂಡಿಯನ್ ನ್ಯಾಷನಲ್ ಆರ್ಮಿ ಸೈನ್ಯವನ್ನು ಸ್ಥಾಪಿಸಿ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ವಿದ್ಯಾರ್ಥಿಗಳು ಸ್ವತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಗಳನ್ನು ಓದಿ ಅವರಂತೆ ದೇಶಕ್ಕಾಗಿ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಶಿಕ್ಷಣ ಪ್ರೇಮಿ ರಾಜಪ್ಪ ಗೌಡ ದಿನ್ನಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಈರಮ್ಮ ಮಹಾದೇವ ಅವರು ಪಂಚಾಯಿತಿಯಿಂದ ಸೇವಾದಳ ಮಕ್ಕಳಿಗೆ ಸಮವಸ್ತ್ರ ಖರೀದಿಸಲು ಚೆಕ್ ವಿತರಿಸಿದರು. ಚಿತ್ರ ಕಲೆ, ದೇಶಭಕ್ತಿ ಗೀತೆ, ಪ್ರಬಂದ ಸ್ಪರ್ಧೆ, ಯೋಗ, ಭಾರತ ಸೇವಾದಳ ಉತ್ತಮ ಸೇವಕ, ಉತ್ತಮ ಸೇವಕಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಗುರು ಶರಣಮ್ಮ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷೆ ಸೌಭಾಗ್ಯ ಶಿವಪ್ಪ, ಸದಸ್ಯ ಗಿರಿಯಪ್ಪ, ಶಿಕ್ಷಕರಾದ ರಮೇಶ ರಾಠೋಡ್, ಭಿಮೇಶ, ರಾವೂತ್, ಫ್ಲಾರೆನ್ಸ್ ಪದ್ಮಾ, ಶೈಲಜಾ, ಡಾ.ಬಿ.ಆರ್. ಅಂಬೇಡ್ಕರ ಯುವ ಅಭಿವೃದ್ದಿ ಸಂಘದ ಕಾರ್ಯದರ್ಶಿ ತಿರುಮಲೇಶ ಇದ್ದರು.
ದೈಹಿಕ ಶಿಕ್ಷಣ ಶಿಕ್ಷಕಿ ಸುಧಾ ಸ್ವಾಗತಿದರೆ, ಶಿಕ್ಷಕ ರವಿ ನಿರೂಪಸಿದರು. ಅಶೋಕ ಪಾಟೀಲ ವಂದಿಸಿದರು.