ರಾಯಚೂರು: ತಾಲ್ಲೂಕು ಉಪನೋಂದಣಿ ಕಚೇರಿಯಲ್ಲಿ ಒಂದು ವಾರದಿಂದ ಇಂಟರ್ನೆಟ್ ನೆಟ್ ವರ್ಕ್ ಸಂಪರ್ಕದ ಸಮಸ್ಯೆಯಿಂದಾಗಿ ನೋಂದಣಿ ಕಾರ್ಯ ಸ್ಥಗಿತವಾಗಿದ್ದು, ಜನರು ಪರದಾಡುವಂತಾಗಿದೆ.
ವಿವಿಧ ಆಸ್ತಿ ನೋಂದಣಿ ಹಾಗೂ ಮದುವೆ ನೋಂದಣಿ ಕಾರ್ಯಕ್ಕಾಗಿ ವಿವಿಧೆಡೆಯಿಂದ ಜನರು ಬರುತ್ತಿದ್ದಾರೆ. ನೆಟ್ ವರ್ಕ್ ಸಮಸ್ಯೆಯ ಪೂರ್ವ ಮಾಹಿತಿಯಿಲ್ಲದಿರುವುದು ಹಾಗೂ ಯಾವಾಗ ನೋಂದಣಿ ಆರಂಭವಾಗುತ್ತದೆ ಎನ್ನುವ ನಿಖರ ಮಾಹಿತಿ ಗೊತ್ತಾಗದ ಕಾರಣ ಜನರು ಕಾದು ನಿಲ್ಲುವಂತಾಗಿದೆ.
ಗ್ರಾಮಗಳಿಂದ ಬರುವ ಜನರು ಅನಗತ್ಯ ವೆಚ್ಚ ಭರಿಸುತ್ತಿದ್ದಾರೆ. ಯಾವುದೇ ಕೆಲಸವಾಗದೆ ಹಿಂದಿರುಗುವಂತಾಗಿದೆ.
ತಾಂತ್ರಿಕ ಸಮಸ್ಯೆ ನೋಡಿ ರೋಸಿಹೋದ ಜನರು ಕಚೇರಿಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಗಲಾಟೆ ಮಾಡುತ್ತಿದ್ದಾರೆ. ಕೂಡಲೇ ನೋಂದಣಿ ಕಾರ್ಯ ಆರಂಭಿಸುವಂತೆ ಆಗ್ರಹಿಸಿ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.
ಗಲಾಟೆ ವಿಷಯ ತಿಳಿದು ಕಚೇರಿಗೆ ಮಂಗಳವಾರ ಆಗಮಿಸಿದ್ದ ರಾಯಚೂರು ತಾಲ್ಲೂಕು ತಹಶಿಲ್ದಾರ್ ಡಾ.ಹಂಪಣ್ಣ ಅವರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಕೂಡಲೇ ನೆಟ್ ವರ್ಕ್ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿ ಹೋಗಿದ್ದಾರೆ.