ರಾಯಚೂರು: ರಾಜ್ಯ ಸರ್ಕಾರವು ಪತ್ರಿಕಾ ವಿತರಕರ ಕಲ್ಯಾಣಕ್ಕಾಗಿ ₹2 ಕೋಟಿ ಅನುದಾನ ಘೋಷಿಸಿ ಎರಡು ವರ್ಷಗಳಾದರೂ ಅದನ್ನು ಜಾರಿಗೊಳಿಸಲು ಮುಂದಾಗುತ್ತಿಲ್ಲ. ಸರ್ಕಾರಿ ಇಲಾಖೆಗಳಿಗೆ ಅಲೆದಾಡುವುದಕ್ಕೂ ಸಮಯವಿಲ್ಲದ ಕೆಲಸ ಇದಾಗಿದ್ದು, ಕನಿಷ್ಠಪಕ್ಷ ವಾರ್ತಾ ಇಲಾಖೆ ಮೂಲಕವಾದರೂ ಸರ್ಕಾರವು ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲೆಯ ಪತ್ರಿಕಾ ವಿತರಕರು ಒಕ್ಕೊರೊಲಿನಿಂದ ಸರ್ಕಾರಕ್ಕೆ ಒತ್ತಾಯಿಸಿದರು.
ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ‘ಪ್ರಜಾವಾಣಿ’ ಪ್ರಸರಣ ವಿಭಾಗದಿಂದ ಬುಧವಾರ ನಸುಕಿನ ಜಾವ ಪತ್ರಿಕಾ ವಿತರಕರ ದಿನಾಚರಣೆ ಆಯೋಜಿಸಲಾಗಿತ್ತು. ಪತ್ರಿಕಾ ವಿತರಕ ಬಸಪ್ಪ ಹಳ್ಳಿ ಅವರು ಕೇಕ್ ಕತ್ತರಿಸಿದರು. ಎಲ್ಲರಿಗೂ ಸಿಹಿ ಹಂಚುವ ಮೂಲಕ ಪ್ರಸರಣ ವಿಭಾಗದ ಜಿಲ್ಲಾ ಪ್ರತಿನಿಧಿ ಅಯ್ಯಣ್ಣ ಅವರು ಶುಭ ಕೋರಿದರು.
ಮಾಧ್ಯಮ ಕ್ಷೇತ್ರದ ಅವಿಭಾಜ್ಯವಾಗಿ ಕೆಲಸ ಮಾಡುತ್ತಿದ್ದರೂ ಸರ್ಕಾರದಿಂದ ಸಾಮಾಜಿಕ ಭದ್ರತೆ ಒದಗಿಸುತ್ತಿಲ್ಲ. ಯೋಜನೆಗಳು ಬರೀ ಘೋಷಣೆಗೆ ಸಿಮೀತವಾಗಿವೆ. ಕೂಡಲೇ ಅಧಿಕಾರಿಗಳು ಸ್ಪಂದಿಸಬೇಕು. ಪತ್ರಿಕಾ ವಿತರಕರು ಮತ್ತು ಕುಟುಂಬಕ್ಕೆ ಆರೋಗ್ಯ ವಿಮೆ ಹಾಗೂ ಇತರೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ವಿತರಕರು ಇದೇ ವೇಳೆ ಒತ್ತಾಯ ಮಾಡಿದರು.
ಪತ್ರಿಕಾ ವಿತರಕರಾದ ಶ್ರೀನಿವಾಸ ಕರ್ಲಿ, ಮಾದೇವಪ್ಪ, ಮೋನುದ್ದಿನ್, ಚಂದ್ರು, ಮುನಿರೆಡ್ಡಿ, ವೀರೇಶ, ತರುಣ್, ತಾಯಪ್ಪ ಇತರರು ಇದ್ದರು.
ವಿತರಕರ ಅಭಿಮತಗಳು....
ಜೀವನ ಭದ್ರತೆಯಿಲ್ಲದೆ ತುಂಬಾ ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರವು ಕನಿಷ್ಠಮಟ್ಟದ ಸೌಲಭ್ಯಗಳನ್ನಾದರೂ ಘೋಷಿಸಿ, ಜಾರಿಗೊಳಿಸಬೇಕು.
- ಶ್ರೀನಿವಾಸ್ ಕರ್ಲಿ, ಪ್ರಜಾವಾಣಿ ಪತ್ರಿಕಾ ವಿತರಕ, ರಾಯಚೂರು
**
ಪತ್ರಿಕಾ ವಿತರಕರ ಸಂಘದಿಂದ ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ, ಸರ್ಕಾರವು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ.
-ಬಸನಗೌಡ ಮೇಟಿ,ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ, ಮಾನ್ವಿ
**
ಪತ್ರಿಕಾ ವಿತರಕರು ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಎಲ್ಲ ದಿನಗಳಲ್ಲೂ ಒಂದೇ ರೀತಿ ಪತ್ರಿಕೆಗಳ ಮಾರಾಟ ಇರುವುದಿಲ್ಲ. ಹೀಗಾಗಿ ವಿಮೆ ಒದಗಿಸಬೇಕು.
- ಚಿನ್ನಪ್ಪ, ಪ್ರಜಾವಾಣಿ, ಪತ್ರಿಕಾ ವಿತರಕ, ಮುದಗಲ್
**
ಸರ್ಕಾರವು ಹಲವು ಯೋಜನೆಗಳನ್ನು ಘೋಷಿಸಿದೆ. ಎಲ್ಲವೂ ಕಡಿತಕ್ಕೆ ಸಿಮೀತವಾಗಿವೆ. ತುರ್ತಾಗಿ ಯೋಜನೆ ಜಾರಿಗೊಳಿಸಬೇಕು.
- ಚಂದ್ರೇಗೌಡ ಜಕ್ಕನಗೌಡರ, ಪ್ರಜಾವಾಣಿ ಪತ್ರಿಕಾ ವಿತರಕ, ಲಿಂಗಸುಗೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.