ನಗರದ ಜನತೆಗೆ ಕುಡಿಯಲು ನೀರು ಸರಬರಾಜು ಮಾಡುವ ದೊಡ್ಡ ಕೆರೆಯ ಒಡ್ಡುಗಳು ಈಗಾಗಲೇ ಬಿರುಕು ಬಿಟ್ಟಿವೆ. ಮುಖ್ಯವಾಗಿ ತಾಲ್ಲೂಕು ಕ್ರೀಡಾಂಗಣದ ಪಕ್ಕದ ಒಡ್ಡು ಬಿರುಕು ಬಿಟ್ಟು ಒಳಭಾಗದಲ್ಲಿ ಪಿಂಚಿಂಗ್ ಮಾಡಲಾಗಿದ್ದ ಕಲ್ಲುಗಳು ಜರಿದು ಬಿದ್ದಿವೆ. ಆರಂಭದಲ್ಲಿ ನಗರಸಭೆ ಅಧಿಕಾರಿಗಳು ದುರಸ್ತಿ ಕಾರ್ಯ ಪೂರ್ಣಗೊಳಿಸಿ ಕೆರೆ ನೀರು ತುಂಬಿಸುವುದಾಗಿ ಹೇಳುತ್ತಿದ್ದರು. ಆದರೆ, ಕುಸಿದ ಕೆರೆಯನ್ನು ದುರಸ್ತಿಗೊಳಿಸದೆ ಇರುವ ಸ್ಥಿತಿಯಲ್ಲಿಯೇ ನೀರು ತುಂಬಿಸಿ ಕೈತೊಳೆದುಕೊಂಡರು. ಅಂದಿನಿಂದ ಇಂದಿನವರೆಗೂ ನಗರಸಭೆ ಪೌರಾಯುಕ್ತರಾಗಲಿ, ಅಧಿಕಾರಿಗಳಾಗಲಿ ಇತ್ತ ಕಣ್ಣೆತ್ತಿ ನೋಡದಿರುವುದು ಇವರ ನಿರ್ಲಕ್ಷ ಧೋರಣೆಗೆ ಸಾಕ್ಷಿಯಾಗಿದೆ ಎಂಬುದು ನಾಗರಿಕರ ಆರೋಪವಾಗಿದೆ.