ಮಸ್ಕಿ: ‘ಗ್ರಾಮೀಣ ಮಹಿಳೆಯರ ಆರ್ಥಿಕ ಸದೃಢತೆಗೆ ನರೇಗಾದಡಿ ವಿಶೇಷ ಆದ್ಯತೆ ನೀಡಲಾಗುತ್ತಿದೆ’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ (ಗ್ರಾಮೀಣ ಉದ್ಯೋಗ) ಶಿವಾನಂದರೆಡ್ಡಿ ಹೇಳಿದರು.
ತೋಟಗಾರಿಕೆ, ಹೂವಿನಭಾವಿಯ ಸಾಮಾಜಿಕ ಅರಣ್ಯ ವಿಭಾಗದಲ್ಲಿ ಸ್ವ ಸಹಾಯ ಗುಂಪಿನ ಮಹಿಳಾ ಸದಸ್ಯರಿಗೆ ಶನಿವಾರ ಹಮ್ಮಿಕೊಂಡಿದ್ದ ನರ್ಸರಿ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೊದಲನೆ ಹಂತದಲ್ಲಿ ಮಾರಲದಿನ್ನಿ, ಅಡವಿಭಾವಿ (ಮಸ್ಕಿ) ಗ್ರಾಮ ಪಂಚಾಯಿತಿಯ ಮುಂದಿನ ಖಾಲಿ ಜಾಗದಲ್ಲಿ ಅರಣ್ಯ ಮತ್ತು ತೋಟಗಾರಿಕೆ ಇಲಾಖೆ ಸಹಕಾರದಲ್ಲಿ ನರ್ಸರಿ ಅಭಿವೃದ್ಧಿಪಡಿಸಲಾಗುವುದು. ಮುಂದೆ ಇವುಗಳನ್ನೆ ಮಾದರಿಯಾಗಿಸಿಕೊಂಡು ಉಳಿದ ಗ್ರಾಮ ಪಂಚಾಯಿತಿಗಳಲ್ಲಿ ನರ್ಸರಿ ಮಾಡಲಾಗುವುದು ಎಂದರು.
ನರ್ಸರಿಯಲ್ಲಿ ತೊಡಗುವ ಮಹಿಳೆಯರಿಗೆ ನರೇಗಾದಡಿ ಕೂಲಿ ಪಾವತಿಸಲಾಗುವುದು. ಮುಂದೆ ಗುಂಪುಗಳಿಂದ ಸಸಿಗಳನ್ನು ಖರೀದಿಸಿ, ಬೇಡಿಕೆ ಅನುಸಾರ ಗ್ರಾಮ ಪಂಚಾಯಿತಿಗಳಿಗೆ ವಿತರಿಸಿ ಅವುಗಳ ರಕ್ಷಣೆಗೆ ಗಮನ ಹರಿಸುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.
ಮನೆ ಕೆಲಸಕ್ಕೆ ಸೀಮಿತವಾಗಿದ್ದ ಮಹಿಳೆಯರು ಇಂದು ನರೇಗಾ ಕೆಲಸ, ಸ್ವ ಸಹಾಯ ಗುಂಪುಗಳಲ್ಲಿ ತೊಡಗಿ ಕುಟುಂಬಕ್ಕೆ ಆಸರೆಯಾಗಿದ್ದಾರೆ. ನಿತ್ಯ ನರ್ಸರಿ ನಿರ್ವಹಣೆಗೆ ಗಮನಹರಿಸಿದಾಗ ಮುಂದೆ ಉತ್ತಮ ಲಾಭ ಪಡೆಯಬಹುದಾಗಿದೆ ಎಂದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಸುಷ್ಮಾ, ಅರಣ್ಯ ಇಲಾಖೆಯ ಆರ್ಎಫ್ಒ ವಿಜಯ ಕುಮಾರ, ವಲಯ ಮೇಲ್ವಿಚಾರಕ ಪ್ರಕಾಶ, ತೋಟಗಾರಿಕೆ ಇಲಾಖೆ ಅಧಿಕಾರಿಗಳಾದ ಭಾಗ್ಯಶ್ರೀ, ಸಂದೇಶ್, ಶಿವಪುತ್ರಪ್ಪ, ವಿವಿಧ ಸ್ವ ಸಹಾಯ ಸಂಘಗಳ ಸದಸ್ಯರು ಇದ್ದರು.