ಸಿಂಧನೂರು: ‘ನೇರ ತರಗತಿ ಆರಂಭಕ್ಕೆ ವಿದ್ಯಾರ್ಥಿಗಳು ಮತ್ತು ಪಾಲಕರ ಸಹಕಾರ ಅಗತ್ಯ’ ಎಂದು ಪ್ರಾಚಾರ್ಯ ಡಾ.ಶಿವರಾಜ ಹಟ್ಟಿ ಹೇಳಿದರು.
ನಗರದ ಪಿಡಬ್ಲ್ಯೂಡಿ ಕ್ಯಾಂಪ್ನಲ್ಲಿರುವ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಪಾಲಕರ ಸಭೆಯಲ್ಲಿ ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಪ್ರಥಮ ಪಿಯುಸಿ ಕಲಾ 67, ವಾಣಿಜ್ಯ 19 ಹಾಗೂ ವಿಜ್ಞಾನ ವಿಭಾಗದಲ್ಲಿ 62 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ 76 ಸೇರಿ ಒಟ್ಟು 214 ವಿದ್ಯಾರ್ಥಿಗಳಿದ್ದಾರೆ. ಕಾಲೇಜಿನಲ್ಲಿ ಬೆಂಚ್ಗೆ ಇಬ್ಬರನ್ನು ಕೂರಿಸಿದರೆ 600 ವಿದ್ಯಾರ್ಥಿಗಳನ್ನು ಕೂಡಿಸಬಹುದು ಎಂದರು.
ಸೆ.21 ರಿಂದ ಮಧ್ಯಾಹ್ನ 1.30 ರಿಂದ 4.30 ರವರೆಗೆ ಪಾಠಗಳಲ್ಲಿನ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ಉಪನ್ಯಾಸಕರ ಜೊತೆಗೆ ಚರ್ಚಿಸಬಹುದು ಎಂದರು.
ಉಪನ್ಯಾಸಕರಾದ ಜಗದೀಶ ಓತೂರು, ಸತ್ಯನಾರಾಯಣ, ಶೇಖರಯ್ಯ, ಹುಡಸಪ್ಪ, ಆದಪ್ಪ, ಸಿದ್ದನಗೌಡ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಪಾಲಕರು ಸಭೆಯಲ್ಲಿದ್ದರು.