ರಾಯಚೂರು: ಜಿಲ್ಲೆಯಾದ್ಯಂತ ನ್ಯಾಯಬೆಲೆ ಅಂಗಡಿಗಳ ಮೂಲಕ ಬಡವರಿಗೆ ತ್ವರಿತವಾಗಿ ಪಡಿತರ ಧಾನ್ಯ ವಿತರಿಸಲು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸುತ್ತಿದ್ದು, ಈಗಾಗಲೇ ಗುರುವಾರ ಭಾಗಶಃ ಅಂಗಡಿಗಳಲ್ಲಿ ವಿತರಣೆ ಆರಂಭಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 713 ಕಡೆಗಳಲ್ಲಿ ಪಡಿತರ ವಿತರಣೆ ವ್ಯವಸ್ಥೆ ಇದ್ದು, ಗುರುವಾರ ಸಂಜೆಯವರೆಗೂ 93 ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಪೂರೈಕೆಯಾಗಿದೆ. ಪಡಿತರ ಪೂರೈಕೆಯಾದ ಕಡೆಗಳಲ್ಲಿಯೂ ವಿತರಣೆಯನ್ನು ಆರಂಭಿಸಲಾಗಿದೆ. ಇನ್ನು ಪಡಿತರ ತಲುಪಬೇಕಾದ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಒಟಿಪಿ ಪಡೆದುಕೊಳ್ಳತ್ತಿ.
‘ಸರ್ಕಾರದ ನಿರ್ದೇಶನದಂತೆಯೆ ಅಕ್ಕಿ, ಗೋಧಿ ಹಂಚಿಕೆ ಮಾಡಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಲ್ಲ ಮಳಿಗೆಗೂ ಸೂಚಿಸಲಾಗಿದೆ. ಕೊರೊನಾ ಸೋಕು ಹರಡದಂತೆ ಮುನ್ನಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಜನರು ಕೂಡಾ ಅಂತರ ಕಾಯ್ದುಕೊಳ್ಳಬೇಕು. ಆರೋಗ್ಯ ಕಾಪಾಡಿಕೊಳ್ಳಲು ಇದನ್ನು ಅನುಸರಿಸಬೇಕು’ ಎಂದು ಇಲಾಖೆಯ ಉಪನಿರ್ದೇಶಕ ಅರುಣ ಸಂಗಾವಿ ‘ ‘ಪ್ರಜಾವಾಣಿ’ಗೆ ತಿಳಿಸಿದರು.
‘ಒಟಿಪಿ ಸಂಖ್ಯೆಯನ್ನು ಆಧರಿಸಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಗುಡ್ಡಗಾಡು ಪ್ರದೇಶ ಹಾಗೂ ಮೊಬೈಲ್ ನೆಟ್ವರ್ಕ್ ಇಲ್ಲದ ಪ್ರದೇಶಗಳಲ್ಲಿ ಒಟಿಪಿ ಇಲ್ಲದಿದ್ದರೂ ಪಡಿತರ ವಿತರಿಸಲು ಸರ್ಕಾರ ಸೂಚನೆ ನೀಡಿದೆ. ರಾಯಚೂರಿನಲ್ಲಿ ಎಲ್ಲ ಕಡೆಗಳಲ್ಲೂ ನೆಟ್ವರ್ಕ್ ಸಿಗುತ್ತಿದೆ’ ಎಂದು ಹೇಳಿದರು.
‘ಪಡಿತರ ಕಾರ್ಡ್ ಹೊಂದಿರುವವರು ದೇಶದ ಯಾವುದೇ ಭಾಗದಲ್ಲಿರುವ ನ್ಯಾಯಬೆಲೆ ಅಂಗಡಿಗಳಲ್ಲಿಯೂ ಕಾರ್ಡ್ ತೋರಿಸಿ, ಒಟಿಪಿ ಕೊಟ್ಟು ಪಡಿತರ ಪಡೆದುಕೊಳ್ಳಬಹುದಾಗಿದೆ. ಮನೆ ಹತ್ತಿರದಲ್ಲಿರುವ ಅಂಗಡಿಗೆ ಬಂದು ತೆಗೆದುಕೊಳ್ಳುವುದು ಮೊದಲಿನಂತೆ ಕಡ್ಡಾಯವೇನಿಲ್ಲ’ ಎಂದು ತಿಳಿಸಿದರು.