ಅರಸೀಕೆರೆ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶುಕ್ರವಾರ ಕೊಬ್ಬರಿ ಧಾರಣೆ ಸ್ವಲ್ಪ ಚೇತರಿಕೆ ಕಂಡುಬಂದಿತು. ಕ್ವಿಂಟಲ್ ಕೊಬ್ಬರಿಗೆ ₹ 1620 ಇದ್ದು, ಕಳೆದ ವಾರದ ದರಕ್ಕಿಂತಲೂ ₹ 50 ಏರಿಕೆಯಾಗಿದೆ.
ಈ ಬೆಳವಣಿಗೆ ತೆಂಗು ಬೆಳೆಗಾರರಿಗೆ ಸಂತಸ ಮೂಡಿಸಿದೆ. ತೆಂಗಿನಕಾಯಿ ದರವೂ ಟನ್ಗೆ ₹ 25 ಸಾವಿರಕ್ಕೆ ಮಾರಾಟವಾಗಿದೆ.
ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಕ್ವಿಂಟಲ್ಗೆ ₹ 14 ಸಾವಿರ ಆಸುಪಾಸಿನಲ್ಲಿದ್ದ ಕೊಬ್ಬರಿ ಧಾರಣೆ ಮೇ ಮೊದಲ ವಾರದಲ್ಲಿ ₹ 17ಸಾವಿರ ತಲುಪಿತು.
ಕಳೆದ ಶುಕ್ರವಾರ ₹ 16,100 ರಿಂದ ₹ 16,150ಧಾರಣೆಯಾಗಿ ತಲುಪಿತ್ತು. ದರ ಕುಸಿತಕ್ಕೆ ಆತಂಕದಿಂದ ಕೆಲ ಬೆಳೆಗಾರರು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಮಧ್ಯೆ ಪ್ರವೇಶಿಸಿದ ಅಧಿಕಾರಿಗಳು ಹರಾಜು ವಹಿವಾಟು ಸ್ಥಗಿತಗೊಳಿಸಿದ್ದರು. ಇಂದು ಹರಾಜು ಪುನರಾರಂಭಗೊಂಡಿದ್ದು ಧಾರಣೆಯು ಮತ್ತೆ ಏರಿಕೆ ಕಂಡಿದೆ.
ಕೊರತೆ: ದಶಕದ ಹಿಂದೆ ತಾಲ್ಲೂಕಿನ ಬಾಣಾವರ ಕಣಕಟ್ಟೆ, ಗಂಡಸಿ ಕಸಬಾ ಹಾಗೂ ಜಾವಗಲ್ ಹೋಬಳಿ ವ್ಯಾಪ್ತಿಯಲ್ಲಿ ತೆಂಗಿನಕಾಯಿ ಇಳುವರಿ ಚೆನ್ನಾಗಿತ್ತು. ಜತೆಗೆ ಕಡೂರು, ತರೀಕೆರೆ, ಭದ್ರಾವತಿ ಹೊಸದುರ್ಗ ಕೆ.ಆರ್.ನಗರದಿಂದಲೂ ಇಲ್ಲಿನ ಎಪಿಎಂಸಿಗೆ ತೆಂಗಿನಕಾಯಿ ಆವಕವಾಗುತ್ತಿತ್ತು.
ಇತ್ತೀಚಿನ ವರ್ಷಗಳಲ್ಲಿ ಮಳೆ ಕೊರತೆ, ಕಪ್ಪು ಹುಳ ಬಾಧೆ, ಬೆಂಕಿರೋಗ ಇನ್ನಿತರ ಕಾರಣಗಳಿಂದ ಸಾಕಷ್ಟು ಪ್ರಮಾಣದಲ್ಲಿ ತೆಂಗಿನಬೆಳೆ ನಾಶವಾಗಿದೆ. ಮಾರುಕಟ್ಟೆಗೆ ಆವಕವೂ ಕುಗ್ಗಿದೆ.
ಕಾರಣ: ನೆರೆಯ ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ಜಮ್ಮು, ನೇಪಾಳ ಗಡಿ ಭಾಗದಲ್ಲಿ ಅರಸೀಕೆರೆ ಹಾಗೂ ತಿಪಟೂರು ತಾಲ್ಲೂಕಿನ ಕೊಬ್ಬರಿಗೆ ಬೇಡಿಕೆಯಿದೆ.
**
ಕೊಬ್ಬರಿ ಹಾಗೂ ತೆಂಗಿನಕಾಯಿ ಧಾರಣೆ ಗಮನಾರ್ಹವಾಗಿ ಏರಿಳಿತ ಕಾಣುತ್ತಿದೆ. ತೆಂಗು ಬೆಳೆಗಾರರು ಲಾಭದ ದೃಷ್ಟಿಯಿಂದ ಇರುವ ದಾಸ್ತಾನು ಮಾರುವುದೋ, ಬೇಡವೋ ಎಂಬ ಗೊಂದದಲ್ಲಿದ್ದಾರೆ
– ಸಿದ್ದರಾಜು, ಕಾರ್ಯದರ್ಶಿ, ಎಪಿಎಂಸಿ
**
ಹೊರ ರಾಜ್ಯಗಳಲ್ಲಿ ರಾಜ್ಯದ ಅರಸೀಕೆರೆ ಹಾಗೂ ತಿಪಟೂರು ತೆಂಗಿನಕಾಯಿ ಮತ್ತು ಕೊಬ್ಬರಿಗೆ ಬೇಡಿಕೆ ಹೆಚ್ಚಿದೆ. ಇದೂ ಕೂಡಾ ದರ ಏರಿಕೆಗೆ ಕಾರಣವಿರಬಹುದು
– ಸತೀಶ್. ವರ್ತಕ, ಅರಸೀಕೆರೆ