ಸಿಂಧನೂರು: ದೇಶದಾದ್ಯಂತ ಕೊರೊನಾ ವೈರಸ್ ಹರಡುವುದನ್ನು ತಡೆಯಬೇಕಿದೆ. ‘ಗೃಹ ದಿಗ್ಬಂಧನ’ದ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದು, ಇದು ಜನಸಾಮಾನ್ಯರಿಗೆ ತೀವ್ರ ಕಷ್ಟವಾದರೂ ಬದುಕುವುದಕ್ಕಾಗಿ ಪಾಲನೆ ಮಾಡುವುದು ಅನಿವಾರ್ಯವಾಗಿದೆ.
ತಾಲ್ಲೂಕಿನಲ್ಲಿಯೂ ಟಾಸ್ಕ್ ಪೋರ್ಸ್ ಸಮಿತಿಯು ಕೊರೊನಾ ವೈರಸ್ ಹರಡದಂತೆ ಶಿಸ್ತು ಕ್ರಮಕೈಗೊಂಡಿದೆ. ಈಗಾಗಲೇ ದಢೇಸುಗೂರು, ಹಂಚಿನಾಳಕ್ಯಾಂಪ್, ಉಮಲೂಟಿ ಬಳಿ ಚೆಕ್ಪೋಸ್ಟ್ಗಳನ್ನು ಹಾಕಲಾಗಿದ್ದು, 1 ಶಿಫ್ಟ್ನಲ್ಲಿ 4 ಜನರಂತೆ ಪ್ರತಿದಿನ ಹಗಲಿರುಳು 36 ಜನ, ಎಸ್ಎಸ್ಟಿ ನಾಲ್ಕು ತಂಡದಲ್ಲಿ 16 ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ನಗರದಲ್ಲಿ 6, ಹೋಬಳಿಗೊಂದರಂತೆ 12 ಸೇರಿ ಒಟ್ಟು 18ಅಧಿಕಾರಿಗಳ ತಂಡ ರಚಿಸಲಾಗಿದೆ. ಹೋಬಳಿ ವ್ಯಾಪ್ತಿಯಲ್ಲಿನ ಹಳ್ಳಿ ಮತ್ತು ಕ್ಯಾಂಪ್ಗಳಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಿ ಕಟ್ಟೆಚ್ಚರ ವಹಿಸಲಾಗಿದೆ.
ಆರೋಗ್ಯ ಇಲಾಖೆಯ ವೈದ್ಯರು, ಆರೋಗ್ಯ ಸಹಾಯಕ-ಸಹಾಯಕಿಯರು, ಆಶಾ ಕಾರ್ಯಕರ್ತೆಯರು ವಿದೇಶಗಳಿಂದ ಬಂದಂತಹ ವ್ಯಕ್ತಿಗಳನ್ನು ಗುರುತಿಸಿ ತಪಾಸಣೆಗೆ ಒಳಪಡಿಸಿ ನಿಗಾವಹಿಸುತ್ತಿದ್ದಾರೆ. ಇನ್ನೂ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಆಟೋಗಳ ಮೂಲಕ ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ. ಅಲ್ಲದೆ ಬೆಳಿಗ್ಗೆ 8 ರಿಂದ 10 ಗಂಟೆವರೆಗೆ ಮಾತ್ರ ಕಿರಾಣಿ, ತರಕಾರಿ, ಹಣ್ಣುಗಳ ಮಾರಾಟಕ್ಕೆ ಸಮಯಾವಕಾಶ ನೀಡಿ, ಆನಂತರ ಬಂದ್ ಮಾಡಿಸುತ್ತಿದ್ದಾರೆ.
ವಿಶೇಷವಾಗಿ ಪೊಲೀಸರು ಬೆಳಿಗ್ಗೆ 10 ಗಂಟೆಯ ನಂತರ ಮನೆಯಿಂದ ಹೊರಗೆ ಬರುವ, ಮುಖ್ಯರಸ್ತೆಗಳಲ್ಲಿ ವಾಹನಗಳನ್ನು ಹಾಕಿಕೊಂಡು ತಿರುಗಾಡುವವರಿಗೆ ಲಾಠಿ ಏಟು ಕೊಟ್ಟು ವಾಪಾಸ್ ಮನೆಗೆ ಕಳುಹಿಸುತ್ತಿದ್ದಾರೆ. ಇಷ್ಟೇ ಅಲ್ಲದೆ ಓಣಿಗಳಲ್ಲಿ ಸಂಚಾರ ನಡೆಸುತ್ತಿದ್ದಾರೆ. ಇದರಿಂದ ಭಯಭೀತರಾಗಿರುವ ಜನರು ಪೊಲೀಸರ ವಾಹನದ ಶಬ್ದ ಕೇಳಿದರೆ ಸಾಕು ಎದ್ದುಬಿದ್ದು ಓಡುತ್ತಿದ್ದಾರೆ. ಕೆಲವರು ಟಿವಿ, ಮೊಬೈಲ್ ನೋಡಿ ನೋಡಿ ಸಾಕಾಗಿ ಹೊರಗೆ ಬಂದರೆ ಪೊಲೀಸರನ್ನು ನೋಡಿ ಎಲ್ಲಿ ಲಾಠಿ ಏಟು ತಿನ್ನಬೇಕಾಗುತ್ತದೆಯೋ ಎಂಬ ಅಂಜಿಕೆಯಿಂದ ಪುನಾ ಮನೆಯೊಳಗೆ ಸೇರುತ್ತಿದ್ದಾರೆ.
ಆಹಾರ ವಿತರಣೆ: ತಾಲ್ಲೂಕಿನ ಬೂದಿಹಾಳ ಕ್ಯಾಂಪಿನ ಗೆಳೆಯರ ಬಳಗದಿಂದ ಮಧ್ಯಾಹ್ನ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿನ ಗರ್ಭಿಣಿಯರು, ಬಾಣಂತಿಯರು, ಅನಾರೋಗ್ಯ ಪೀಡಿತರು ಮತ್ತು ವಿವಿಧ ಊರುಗಳಿಂದ ಬಂದು ಮುಖ್ಯರಸ್ತೆಯ ಬದಿಯಲ್ಲಿ ಕುಳಿತಿದ್ದ ಜನರಿಗೆ ಪಲಾವ್, ಶರಬತ್ ಮತ್ತು ನೀರಿನ ಪ್ಯಾಕೇಟ್ಗಳನ್ನು ವಿತರಿಸಿ ಮಾನವೀಯತೆ ಮೆರೆದರು.
ಗೆಳೆಯರ ಬಳಗದ ಸದಸ್ಯರಾದ ಕಿರಣಕುಮಾರ, ನಾಗರಾಜ ಪೂಜಾರ, ಬಜೇರಪ್ಪ, ಅಮೀನಸಾಬ ನದಾಫ್, ನಾಗರಾಜ ಮತ್ತು, ನರೇಶ, ಶ್ರೀನಿವಾಸ, ಸುಂದರ್, ನರಸಿಂಹಲು, ಅನಿಲ್, ಲಕ್ಷ್ಮಣ್ ಇದ್ದರು.
ಬಸನಗೌಡ ಬಾದರ್ಲಿ ಫೌಂಡೇಷನ್ನಿಂದ ಮೂರನೇ ದಿನವೂ ಆಹಾರದ ಪ್ಯಾಕೇಟ್ಗಳನ್ನು ವಿತರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.