ರಾಯಚೂರು: ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದಿಂದ ಜುಲೈ 15 ರಂದು ಪ್ರತಿಭಾ ಪುರಸ್ಕಾರ, ಪರಿಶಿಷ್ಟ ಪಂಗಡದ ಶಾಸಕರಿಗೆ ಸನ್ಮಾನ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಪೂರ್ವ ತಯಾರಿ ಕುರಿತು ಸಂವಾದವನ್ನು ಏರ್ಪಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಯಲ್ಲಪ್ಪ ಜಾಲಿಬೆಂಚಿ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಬೆಳಿಗ್ಗೆ 9.30 ಕ್ಕೆ ಸನ್ಮಾನ ಸಮಾರಂಭ ನಡೆಯುವುದು. ಮಧ್ಯಾಹ್ನ 3.30 ರಿಂದ ಸಂಜೆ 5.30 ರವರೆಗೂ ಬೆಂಗಳೂರು ನಗರ ಪಶ್ಚಿಮ ವಲಯದ ಡಿಸಿಪಿ ರವಿ ಡಿ.ಚನ್ನಣ್ಣವರ್ ಹಾಗೂ ಕೆಜಿಐಡಿ ಹಣಕಾಸು ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟೇಶ ನಾಯಕ ಅವರೊಂದಿಗೆ ಸಂವಾದ ನಡೆಯುವುದು ಎಂದರು.
ಸುಮಾರು 200 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುತ್ತಿದ್ದು, ಈಗಾಗಲೇ ನೋಂದಣಿ ಆರಂಭಿಸಲಾಗಿದೆ. ಸಮಾರಂಭದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ವಧು–ವರರ ಮಾಹಿತಿ ಸಂಗ್ರಹ ವಿಭಾಗ ತೆರೆಯಲಾಗುವುದು. ಸಮಾಜದ ಬಂಧುಗಳು ಮಾಹಿತಿಯನ್ನು ಒದಗಿಸಬಹುದು ಎಂದು ತಿಳಿಸಿದರು.
ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಸಮಾರಂಭ ಉದ್ಘಾಟಿಸುವರು. ಗೋಲಪಲ್ಲಿ ವಾಲ್ಮೀಕಿ ಆಶ್ರಮದ ವರದಾನೇಶ್ವರ ಸ್ವಾಮೀಜಿ, ಗಾರಲದಿನ್ನಿ ಶಿವಾನಂದ ಮಠದ ಮೌನೇಶ ಮಹಾರಾಜ, ರಾಜರಾಜೇಶ್ವರಿ ಆಶ್ರಮದ ನಾಮದೇವಗೌಡರು ಸಾನಿಧ್ಯ ವಹಿಸುವರು. ಸಂಸದ ಬಿ.ವಿ. ನಾಯಕ ಜ್ಯೋತಿ ಬೆಳಗಿಸುವರು ಎಂದು ಹೇಳಿದರು.
ಶಾಸಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಳ್ಳುವರು ಎಂದರು. ಸಂಘದ ಪ್ರಧಾನ ಕಾರ್ಯದರ್ಶಿ ಭೀಮಯ್ಯ ನಾಯಕ, ಕಾರ್ಯದರ್ಶಿ ತಿಮ್ಮಪ್ಪ ನಾಯಕ, ಖಜಾಂಚಿ ಎಂ.ಗಿರಿಯಪ್ಪ ದಿನ್ನಿ, ಸಹ ಕಾರ್ಯದರ್ಶಿ ಶಿವರಾಜ ಮೇಟಿಗೌಡ, ಸಂಘಟನಾ ಕಾರ್ಯದರ್ಶಿ ತಿರುಮಲೇಶ ಪತ್ರಿಕಾಗೋಷ್ಠಿಯಲ್ಲಿ ಇದ್ದರು.