ರಾಯಚೂರು: ಸರ್ಕಾರಿ ಬಸ್ ಸಂಚಾರ ಸ್ಥಗಿತವಾಗಿರುವುದನ್ನು ಅವಕಾಶ ಮಾಡಿಕೊಂಡಿರುವ ಖಾಸಗಿ ವಾಹನದಾರರು ಪ್ರಯಾಣಿಕರಿಗೆ ದುಪ್ಪಟ್ಟು ಹಣ ಕೇಳುತ್ತಿದ್ದಾರೆ.
ರಾಯಚೂರಿನಿಂದ ಸಿಂಧನೂರಿಗೆ ₹200, ಮಾನ್ವಿಗೆ ₹100, ಸಿರವಾರಕ್ಕೆ ₹80 ರಿಂದ ₹100 ಹಾಗೂ ದೇವದುರ್ಗಕ್ಕೆ ₹100 ಪಡೆಯುತ್ತಿದ್ದಾರೆ.
ರಾಜ್ಯದ ಕರಾವಳಿ ಮತ್ತು ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಇರುವಂತೆ ರಾಯಚೂರಿನಲ್ಲಿ ಖಾಸಗಿ ಬಸ್ ಸಂಚಾರ ವ್ಯವಸ್ಥೆ ಇಲ್ಲ. ಕ್ರೂಸರ್, ಜೀಪ್, ಟೆಂಪೊ ಹಾಗೂ ಆಟೊಗಳಲ್ಲಿ ಜನರು ಸಂಚರಿಸುತ್ತಿದ್ದಾರೆ.
ನೆರೆಯ ಕಲಬುರ್ಗಿ, ಕೊಪ್ಪಳ, ಬಳ್ಳಾರಿ ಸೇರಿದಂತೆ ಹೊರ ಜಿಲ್ಲೆಗಳಿಗೆ ಸಂಚರಿಸುವುದಕ್ಕೆ ಯಾವುದೇ ವಾಹನಗಳಿಲ್ಲ. ದೂರದ ಬೆಂಗಳೂರು, ಹುಬ್ಬಳ್ಳಿ, ವಿಜಯವಾಡ, ಪುಣೆ, ಬೆಳಗಾವಿಗೆ ಖಾಸಗಿ ವಾಹನಗಳು ರಾತ್ರಿ ಹೊರಡುತ್ತವೆ.