ರಾಯಚೂರು: ಯುಎಪಿಎ, ಎನ್ಐಎ, ಆರ್ಟಿಐ ಕಾಯ್ದೆಗಳಲ್ಲಿ ಬದಲಾವಣೆ ಮಾಡಿರುವುದನ್ನು ಮತ್ತು ಸಂಸತ್ತಿನ ಉಭಯ ಸದನಗಳಲ್ಲಿ ತಿದ್ದುಪಡಿ ಅಂಗೀಕರಿಸುವ ಮೂಲಕ ಕಾಶ್ಮೀರ ವಿಭಜಿಸಿದ ನೀತಿ ವಿರೋಧಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸದಸ್ಯರು ಜಿಲ್ಲಾಧಿಕಾರಿ ಕಚೇರಿಯ ಎದುರಿಗೆ ಶನಿವಾರ ಫ್ಯಾಸಿಸಂ ಕ್ವಿಟ್ ಇಂಡಿಯಾ (ಫ್ಯಾಸಿಸ್ಟರೇ ಭಾರತ ಬಿಟ್ಟು ತೊಲಗಿ) ಪ್ರತಿಭಟನೆ ನಡೆಸಿದರು.
ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ತರಾತುರಿಯಲ್ಲಿ ತಿದ್ದುಪಡಿ ಅಂಗೀಕರಿಸಿದೆ, ಪ್ರತಿಪಕ್ಷಗಳ ಏಕತೆಯನ್ನು ದುರ್ಬಲಗೊಳಿಸಿದೆ. ಹಿಂದುತ್ವದ ಬಲವನ್ನು ಸಮಾಧಾನ ಪಡಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದ್ದು, ಜಮ್ಮು ಕಾಶ್ಮೀರಕ್ಕೆ ಅನ್ವಯವಾಗುವ ಸಂವಿಧಾನದ 370ನೇ ವಿಧಿ ಮತ್ತು 35ಎ ವಿಧಿಯನ್ನು ರದ್ದುಪಡಿಸುವ ಮೂಲಕ ಕಾಶ್ಮೀರ ಜನರ ಹಕ್ಕುಗಳನ್ನು ಕೇಂದ್ರ ಸರ್ಕಾರ ಇಲ್ಲದಂತೆ ಮಾಡಿದೆ ಎಂದು ಆರೋಪಿಸಿದರು.
ನಗರ ಘಟಕ ಅಧ್ಯಕ್ಷ ಮತೀನ ಅನ್ಸಾರಿ, ಮಸರೂರ್ ಅಹ್ಮದ್, ಮೊಹಮದ್ ಶಫಿ, ಏಜಾಜ್, ಮೊಹ್ಮದ್ ಸುಹೆಲ್, ರಫಿ, ಜಿಲಾನಿ ಪಾಷ, ಹುಸೇನ್, ಸೈಯದ್ ಆರೀಫ್ ಇದ್ದರು.