ರಾಯಚೂರು: ನಗರದ ಹೊರವಲಯದ ಚಂದ್ರಬಂಡಾ ರಸ್ತೆಯಲ್ಲಿ ಸರ್ವೆ ನಂಬರ್573, 574 ಹಾಗೂ 581 1991–92 ರಲ್ಲಿ ನಿರ್ಮಾಣವಾಗಿರುವ ಆಶ್ರಯ ಕಾಲೋನಿಯ ಬಡ ನಿವಾಸಿಗಳ ಎತ್ತಂಗಡಿ ಆದೇಶ ಹಿಂಪಡೆಯಬೇಕು ಎಂದು ಸಿಪಿಐ(ಎಮ್ ಎಲ್) ರೆಡ್ ಸ್ಟಾರ್, ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಘದ ನೇತೃತ್ವದಲ್ಲಿ ಬಡಾವಣೆಯ ನಿವಾಸಿಗಳು ನಗರದ ಟಿಪ್ಪುಸುಲ್ತಾನ ಉದ್ಯಾನದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಆನಂತರ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿ, ಚಂದ್ರಬಂಡಾ ರಸ್ತೆಯಲ್ಲಿ ಖಾಸಗಿಜಮೀನುಗಳನ್ನು ಸ್ವಾಧೀನ ಪಡಿಸಿಕೊಂಡು ಆರಂಭದಲ್ಲಿ 215 ಮನೆಗಳನ್ನು ನಿರ್ಮಿಸಲಾಯಿತು. ಕೆಲವರು ಅಕ್ರಮ ದೂರು ನೀಡಿದ ಹಿನ್ನೆಲೆಯಲ್ಲಿ 4–5– 2015ರಿಂದ ಇಲ್ಲಿ ವಾಸವಾಗಿರುವ ಎಲ್ಲರನ್ನೂ ಇಲ್ಲಿಯೇ ಉಳಿಸಬೇಕು ಎಂದು ನಗರಸಭೆಯ ಮುಂದೆ 670 ದಿನಗಳ ಕಾಲ ಹೋರಾಟ ಮಾಡಲಾಗಿತ್ತು ಎಂದರು.
ನಂತರ ಸಂಘಟನೆ ಹಾಗೂ ನಗರಸಭೆ ಜಂಟಿಯಾಗಿ ಸಮೀಕ್ಷೆ ನಡೆಸಿ ವಾಸವಾಗಿರುವ ನಿಜವಾದ ಬಡವರ ಯಾದಿ ತಯಾರಿಸಿ ಆಶ್ರಯ ಕಮಿಟಿ ಮುಂದೆ ಇಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶಾಸಕ ಡಾ. ಶಿವರಾಜ ಪಾಟೀಲ ಇಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ನೀಡುವುದಾಗಿ ಘೋಷಣೆ ಮಾಡಿದ್ದರು.
ಏಕಾಏಕಿ ಕಳೆದ 20 ರಂದು ಆಶ್ರಯ ಕಾಲೋನಿಯ ಅಕ್ರಮ ಕಟ್ಟಡಗಳ ತೆರವಿಗೆ ಜಿಲ್ಲಾಡಳಿತ ಆದೇಶ ನಿಡಿದ್ದು ಖಂಡನೀಯ. ಇಲ್ಲಿ ಕೆಲ ಅಕ್ರಮಗಳಿದ್ದಲ್ಲಿ ಅಧಿಕಾರಿಗಳೇ ಕಾರಣ, ಜಿಲ್ಲಾಡಳಿತ ಸರ್ಕಾರದ ಪಿತೂರಿಯಂತೆ ಆದೇಶ ಜಾರಿ ಮಾಡಲು ಹೊರಟಿದ್ದು ಸರಿಯಲ್ಲ ಎಂದು ದೂರಿದರು.
ಕೂಡಲೇ ಜಿಲ್ಲಾಡಳಿತ ಆದೇಶ ರದ್ದುಪಡಿಸಿ 25 ವರ್ಷಗಳಿಂದ ವರ್ಷಗಲಿಂದವಾಸವಾಗಿರುವ ಬಡವರಿಗೆ ಶೀಘ್ರವೇ ಹಕ್ಕು ಪತ್ರ ನೀಡಬೇಕು ಹಾಗೂ ಸರ್ಕಾರಿ ಭೂಮಿ ಕಬಳಿಸಲು ಕಾರಣರಾದ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಸಿಪಿಐ (ಎಂ.ಎಲ್) ರೆಡ್ ಸ್ಟಾರ್ ಅಧ್ಯಕ್ಷ ಆರ್. ಮಾನಸಯ್ಯ, ಜಿ. ಅಮರೇಶ, ನೂರ್ ಜಹಾನ್, ಮಣಿ, ಶೇಖ ಹುಸೇನ ಬಾಷಾ, ರವಿ ದಾದಸ್ ಸೇರಿದಂತೆ ನಿವಾಸಿಗಳು ಇದ್ದರು.