ಲಿಂಗಸುಗೂರು: ‘ಇಲ್ಲಿನ ಪುರಸಭೆಯಲ್ಲಿ ಕೆಲಸ ಮಾಡಿಸಿಕೊಡುವ ನೆಪದಲ್ಲಿ ಮಧ್ಯವರ್ತಿಗಳು ಭ್ರಷ್ಟಾಚಾರ ನಡೆಸುತ್ತಿದ್ದು, ಸಂಬಂಧಿಸಿದ ಮೇಲಧಿಕಾರಿಗಳು ಕೂಡಲೇ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು’ ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು,‘ಕಚೇರಿಗೆ ಬರುವ ಸಾರ್ವಜನಿಕರಿಂದ ಖಾತಾ ನಕಲು, ವರ್ಗಾವಣೆ ನಕಲು, ಕಟ್ಟಡ ಪರವಾನಿಗೆ, ತೆರಿಗೆ, ನೀರಿನ ಕರ ಸೇರಿದಂತೆ ಪ್ರತಿಯೊಂದು ಕಾರ್ಯಗಳಿಗೂ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹತ್ತಾರು ಪಟ್ಟು ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ. ಇದು ಸಲ್ಲ’ ಎಂದು ಖಂಡಿಸಿದರು.
ಕಚೇರಿಯಲ್ಲಿನ ಸಿಬ್ಬಂದಿಗಿಂತ ಮಧ್ಯವರ್ತಿಗಳ ಸಂಖ್ಯೆಯೇ ಹೆಚ್ಚಾಗಿದೆ. ಮಧ್ಯವರ್ತಿಗಳ ಮೂಲಕ ಒಳಗಡೆ ಹೋಗದಿದ್ದರೆ ಕೆಲಸಗಳು ಆಗುತ್ತಿಲ್ಲ. ಎಲ್ಲ ಅಧಿಕಾರಿಗಳಿಗೂ ಹಣ ಹೋಗುತ್ತಿದೆ ಎಂದು ದೂರಿದರು.
ಸಾರ್ವಜನಿಕರ ಮಾಹಿತಿಗಾಗಿ ಸೇವೆಗಳಿಗೆ ಸರ್ಕಾರ ನಿಗದಿಪಡಿಸಿದ ದರಪಟ್ಟಿ ಹಾಕಬೇಕು. ಮಧ್ಯವರ್ತಿಗಳನ್ನು ಕಚೇರಿಗಳಿಂದ ದೂರ ಇಡಬೇಕು. ಶುದ್ಧ ನೀರಿನ ವ್ಯವಸ್ಥೆ ಮಾಡಬೇಕು. ವಿದ್ಯುತ್ ದೀಪ ಅಳವಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಜಿಲಾನಿಪಾಷ, ಮುಖಂಡರಾದ ಚಂದ್ರು ನಾಯಕ, ಅಜೀಜ್ಪಾಷಾ, ರವಿಕುಮಾರ ಬರಗುಡಿ, ಹನುಮಂತ ನಾಯಕ, ನಿರುಪಾದಿ, ಅಮರೇಶ ಹಟ್ಟಿ, ಹುಮಂತ ಭಜಂತ್ರಿ, ಸಾದತ್, ಅಲ್ಲಾವುದ್ದೀನ್, ಇಲಿಯಾಸ್, ಆರೀಫ್, ಅಜ್ಜು ಹಾಗೂ ಶೋಹಿತ್ ನೇತೃತ್ವ ವಹಿಸಿದ್ದರು.