ಬೆಂಗಳೂರು: ಮೊಹಮದ್ ನಲಪಾಡ್ ಹಾಗೂ ಆತನ ಸಹಚರರ ಜಾಮೀನು ಅರ್ಜಿಯ ಆದೇಶವನ್ನು ನ್ಯಾಯಾಲಯ ಮಾರ್ಚ್ 2ಕ್ಕೆ ಕಾಯ್ದಿರಿಸಿರುವ ಬೆನ್ನಲ್ಲೇ ಶಾಸಕ ಎನ್.ಎ.ಹ್ಯಾರಿಸ್ ಗಾಯಾಳು ವಿದ್ವತ್ ಹಾಗೂ ಅವರ ತಂದೆ ಲೋಕನಾಥನ್ರನ್ನು ಭೇಟಿ ಮಾಡಿದರು.
ಮಲ್ಯ ಆಸ್ಪತ್ರೆಗೆ ಬುಧವಾರ ಬೆಳಿಗ್ಗೆ ಬಂದಿದ್ದ ಹ್ಯಾರಿಸ್, ವಿಶೇಷ ವಾರ್ಡ್ಗೆ ಹೋಗಿ ವಿದ್ವತ್ ಜತೆ ಕೆಲ ನಿಮಿಷ ಮಾತನಾಡಿ ಆರೋಗ್ಯದ ಮಾಹಿತಿ ಪಡೆದುಕೊಂಡರು. ವಾರ್ಡ್ನಲ್ಲಿದ್ದ ಲೋಕನಾಥನ್ ಅವರನ್ನು ಹೊರಗೆ ಕರೆದುಕೊಂಡು ಬಂದು ಮಾತನಾಡಿಸಿದರು.
ಆಸ್ಪತ್ರೆಯಿಂದ ಹೊರ ಬಂದ ಹ್ಯಾರಿಸ್ ಅವರನ್ನು ಮಾತನಾಡಿಸಲು ಸುದ್ದಿಗಾರರು ಪ್ರಯತ್ನಿಸಿದರು. ಆದರೆ, ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟು ಹೋದರು.
ಹ್ಯಾರಿಸ್ಗೂ ಮುನ್ನ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಸಹ ಆಸ್ಪತ್ರೆಗೆ ಬಂದಿದ್ದರು. ಅದೇ ವೇಳೆ ಗಾಯಾಳು ಹಾಗೂ ಅವರ ತಂದೆಯ ಜತೆ ಮಾತನಾಡಿ ಆರೋಗ್ಯ ವಿಚಾರಿಸಿದ್ದರು.
ಸುದ್ದಿಗಾರರ ಜತೆ ಮಾತನಾಡಿದ ಜಮೀರ್, ‘ವಿದ್ವತ್ ಆರೋಗ್ಯವಾಗಿದ್ದಾರೆ. ವಾರ್ಡ್ನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಅವರ ತಂದೆ ಜತೆಯೂ ಮಾತನಾಡಿದೆ. ಇನ್ನೂ ಒಂದು ವಾರ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ’ ಎಂದರು.