ಮಸ್ಕಿ: ‘ಸುಪ್ರೀಂಕೋರ್ಟ್ ಆದೇಶದಂತೆ ಬೇಡ ಜಂಗಮ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿ ಜೂ.30 ರಂದು ಬೆಂಗಳೂರು ಚಲೋ ಹಾಗೂ ಜೈಲ್ ಬರೋ ಚಳವಳಿ ಹಮ್ಮಿಕೊಳ್ಳಲಾಗಿದೆ’ ಎಂದು ಜಂಗಮ ಸಮಾಜದ ಅಧ್ಯಕ್ಷ ಸಿದ್ಧಲಿಂಗಯ್ಯ ಸೊಪ್ಪಿಮಠ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಹಲವು ವರ್ಷಗಳಿಂದ ಬೇಡ ಜಂಗಮ ಪ್ರಮಾಣ ಪತ್ರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ. ಆದರೆ ಸರ್ಕಾರಗಳು ನಮ್ಮ ಬೇಡಿಕೆಗೆ ಸಕರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಬೇಡ ಜಂಗಮ ಪ್ರಮಾಣ ಪತ್ರ ಪಡೆಯುವುದು ನಮ್ಮ ಹಕ್ಕು. ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ’ ಎಂದರು.
30ರಂದು ನಡೆಯುವ ಚಳವಳಿಗೆ ಮಸ್ಕಿ ತಾಲ್ಲೂಕಿನಿಂದ ಸಮುದಾಯದ ಸಾವಿರಕ್ಕೂ ಹೆಚ್ಚು ಜನ ತೆರಳಲಿದ್ದಾರೆ ಎಂದು ಹೇಳಿದರು.
ಮುಖಂಡ ಕರಿಬಸ್ಸಯ್ಯ ಮಾತನಾಡಿ,‘ಬೇಡ ಜಂಗಮ ಪ್ರಮಾಣ ಪತ್ರ ಕೊಡಿಸಲು ಸಂಸದರು, ಶಾಸಕರು ವಿಫಲರಾಗಿದ್ದಾರೆ. ಸರ್ಕಾರ ನಿರ್ಲಕ್ಷ್ಯ ವಹಿಸಿದೆ’ ಎಂದು ಆರೋಪಿಸಿದರು.
ಜಂಗಮ ಸಮಾಜದ ಘಟಕದ ಗೌರವಾಧ್ಯಕ್ಷ ಡಾ.ಪಂಚಾಕ್ಷರಯ್ಯ ಕಂಬಳಿಮಠ, ಕಾರ್ಯದರ್ಶಿ ಶಿವಕುಮಾರ, ಮುಖಂಡ ಆದಯ್ಯಸ್ವಾಮಿ ಕ್ಯಾತನಟ್ಟಿ, ಅಮರಯ್ಯ ಸ್ವಾಮಿ ಹಾಗೂ ಶಿವಶಂಕರಯ್ಯ ಗಚ್ಚಿನಮಠ ಇದ್ದರು.