ರಾಯಚೂರು: ಕರ್ತವ್ಯದ ವೇಳೆ ಸಾರ್ವಜನಿಕ ಪ್ರದೇಶದಲ್ಲಿ ಪರಿಶಿಷ್ಟ ಸಮಾಜದ ಅಧಿಕಾರಿಗೆ ನಗರಸಭೆ ಅಧ್ಯಕ್ಷ ಈ.ವಿನಯಕುಮಾರ ಬೆದರಿಕೆ ಹಾಕಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿ ಹರಿಜನವಾಡದ ನಾಗರೀಕ ವೇದಿಕೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರಾಭಿವೃದ್ಧಿ ಕೋಶದ ಮುಖ್ಯ ಅಧಿಕಾರಿಗೆ ಮನವಿ ಸಲ್ಲಿಸಿದರು. ನಾಗರಿಕರೊಂದಿಗೆ ಚರ್ಚಿಸಿ ತೀರ್ಮಾಸಿದಂತೆಫೆಬ್ರುವರಿ 13 ರಂದು ಪೌರಾಯುಕ್ತರು ಪೋಲಿಸ್ ಇಲಾಖೆಯ ಸಹಕಾರದೊಂದಿಗೆ 50 ಅಡಿ ರಸ್ತೆ ವಿಸ್ತರಣೆಗೆ ಜಮುನಾ ಮೆಡಿಕಲ್ನಿಂದ ತೆರವು ಪ್ರಾರಂಭಿಸಿದ್ದರು. ನಗರಸಭೆ ಅಧ್ಯಕ್ಷ ಈ.ವಿನಯ್ ಕುಮಾರ್ ದಿಢೀರನೆ ಸ್ಥಳಕ್ಕೆ ಆಗಮಿಸಿ ಪೌರಾಯುಕ್ತರು ಹಾಗೂ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಏಕವಚನದಲ್ಲಿ ನಿಂದಿಸಿದ್ದಾರೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಇದು ವಾರ್ಡ್ ತೆರವುಗೊಳಿಸಲು ಅವಕಾಶ ಕೊಡುವುದಿಲ್ಲ ಎಂದು ಏರುಧ್ವನಿಯಲ್ಲಿ ಆವಾಜ್ ಹಾಕಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿದರು.
ಪರಿಶಿಷ್ಟ ಜಾತಿಯ ಅಧಿಕಾರಿ ಮತ್ತು ಸಿಬ್ಬಂದಿಗೆ ಸಾರ್ವಜನಿಕವಾಗಿ ನಿಂದಿಸಿ ದಿಗ್ಭಂಧನ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ನಗರಸಭೆಯ ಅಧ್ಯಕ್ಷ ಈ.ವಿನಯ್ ಕುಮಾರ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಹಾಗೂ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಹಾಗೂ ಅಧಿಕಾರಿ ಹಾಗೂ ಸಿಬ್ಬಂದಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿ ಕೆ.ಪಿ.ಅನಿಲಕುಮಾರ, ಜನಾರ್ಧನ ಹಳ್ಳಿಬೆಂಚಿ, ಎಸ್.ರಾಜು, ಹುಲಿಗೆಪ್ಪ, ಬಾಬು, ಎಚ್.ಪದ್ಮಾ, ಕೆ.ಜಿ.ವೀರೇಶ, ಚಂದ್ರಶೇಖರ, ಶಿವಪ್ಪ, ಚಂದ್ರು, ಗೋಪಾಲ ಮತ್ತಿತರರು ಇದ್ದರು.