ರಾಯಚೂರು: ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿ ವಸತಿ ನಿಲಯ ಮತ್ತು ವಸತಿ ಶಾಲೆಯಲ್ಲಿ ಹೊರ ಗುತ್ತಿಗೆ ಸಿಬ್ಬಂದಿಗೆ ಬಾಕಿ ವೇತನ ಪಾವತಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬಿ.ಕೃಷ್ಣಪ್ಪ ಬಣ) ಜಿಲ್ಲಾ ಘಟಕದ ನೇತೃತ್ವದಲ್ಲಿ ಸಿಬ್ಬಂದಿ ನಗರದ ಟಿಪ್ಪುಸುಲ್ತಾನ್ ಉದ್ಯಾನದಲ್ಲಿ ಶುಕ್ರವಾರ ಧರಣಿ ನಡೆಸಿದರು.
ಎಂಟು ತಿಂಗಳಿನಿಂದ ವೇತನ ಪಾವತಿಸದೇ ಬಾಕಿ ಉಳಿಸಿಕೊಳ್ಳಲಾಗಿದ್ದು, ಕೆಲಸ ಮಾಡಿ ವೇತನ ದೊರೆಯದೇ ಸಿಬ್ಬಂದಿ ಜೀವನ ನಡೆಸಲು ಕಷ್ಟ ಪಡುವಂತಾಗಿದೆ. ಹೊರ ಗುತ್ತಿಗೆ ಪಡೆದಿರುವ ಎಆರ್ಸಿ ಸಂಸ್ಥೆ ನಿಗದಿತ ವೇತನಕ್ಕಿಂತ ಕಡಿಮೆ ವೇತನ ನೀಡುವ ಮೂಲಕ ಅನ್ಯಾಯ ಮಾಡುತ್ತಿದೆ. ತ್ವರಿತವಾಗಿ ವೇತನ ಪಾವತಿಸಲು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜಿ.ಕುಮಾರನಾಯಕ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿ ತಿಂಗಳು ವೇತನ ನೀಡುವುದಾಗಿ ಆದೇಶದಲ್ಲಿ ತಿಳಿಸಿರುವ ಏಜೆನ್ಸಿಯವರು ಅನೇಕ ತಿಂಗಳುಗಳು ಕಳೆದರೂ ವೇತನ ನೀಡುತ್ತಿಲ್ಲ. ದೇವದುರ್ಗ ತಾಲ್ಲೂಕಿನ ನಾಗಡದಿನ್ನಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಕಟ್ಟಡ ನಿರ್ಮಾಣ ಮಾಡಬೇಕು. ಬಾಡಿಗೆ ಕಟ್ಟಡಗಳಲ್ಲಿರುವ ವಸತಿ ನಿಲಯಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಆಲ್ಕೋಡ್ ವಸತಿ ನಿಲಯಕ್ಕೆ ತಡೆಗೋಡೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಸಂಚಾಲಕ ಹನುಮಂತಪ್ಪ ಕಾಕರಗಲ್, ಪದಾಧಿಕಾರಿಗಳಾದ ಶಿವಪ್ಪ ಪಲಕನಮರಡಿ, ಹೈದರ ಅಲಿ, ಕೆ.ನಲ್ಲಾರೆಡ್ಡಿ ನಾಯಕ, ಎಂ.ಹನುಮಂತು, ಗಂಗಾ ಅಮೀನಗಡ, ಯಲ್ಲಪ್ಪ ಮಲ್ದಕಲ್, ಅಯ್ಯಮ್ಮ, ಶಿವಪ್ಪ, ಮರಿಯಮ್ಮ, ಚಂದ್ರಕಾಂತ, ಮಲ್ಲಯ್ಯ, ಹನುಮಂತ, ಶಾಂತಪ್ಪ ಇದ್ದರು.