ರಾಯಚೂರು: ಜಿಲ್ಲೆಯಾದ್ಯಂತ ಸರ್ಕಾರಿ ಕಚೇರಿಗಳು ಎಂದಿನಂತೆ ಬುಧವಾರ ಬಾಗಿಲು ತೆರೆದುಕೊಂಡಿವೆ. ಆದರೆ ಕಚೇರಿಗಳಲ್ಲಿ ಕುರ್ಚಿಗಳೆಲ್ಲವೂ ಖಾಲಿ ಇದ್ದು, ಮೌನ ಆವರಿಸಿದೆ.
7ನೇ ವೇತನ ಆಯೋಗ ವರದಿ ಜಾರಿಗಾಗಿ ಮಾರ್ಚ್ 1 ರಿಂದ ಅನಿರ್ದಿಷ್ಟಾವಧಿ ಕೆಲಸಕ್ಕೆ ಗೈರಾಗಲು ಸರ್ಕಾರಿ ನೌಕರರ ಸಂಘವು ಕರೆ ನೀಡಿದ್ದು, ರಾಯಚೂರು ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಅನುದಾನಿತ ಸೇರಿದಂತೆ ಎಲ್ಲ ಸರ್ಕಾರಿ ಶಾಲಾ, ಕಾಲೇಜುಗಳು ಖಾಲಿಖಾಲಿಯಾಗಿವೆ. ವಿದ್ಯಾರ್ಥಿಗಳು ಮನೆಗಳಿಗೆ ವಾಪಸಾದರು.
ಜಿಲ್ಲಾಧಿಕಾರಿ ಕಚೇರಿ, ತಹಧೀಲ್ದಾರರ ಕಚೇರಿಗಳಿಗೆ ವಿವಿಧ ಕೆಲಸಕ್ಕಾಗಿ ಜನರು ಬರುತ್ತಿದ್ದು, ನಿರಾಸೆಯಿಂದ ವಾಪಸಾಗುತ್ತಿದ್ದಾರೆ. ರಿಮ್ಸ್ ಆಸ್ಪತ್ರೆಯಲ್ಲಿ ಎಂದಿನಂತೆ ಜನರಿಗೆ ವೈದ್ಯಕೀಯ ಚಿಕಿತ್ಸೆ ಮುಂದುವರಿಸಲಾಗಿದೆ. ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ಸೇವೆ ಮಾತ್ರ ಲಭ್ಯವಿದೆ.