ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಮಂತ ಚರಿತ್ರೆಯ ನಾಡು ರಾಯಚೂರು: ಜಯಣ್ಣ

ದಸರಾ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
Last Updated 5 ಅಕ್ಟೋಬರ್ 2022, 13:02 IST
ಅಕ್ಷರ ಗಾತ್ರ

ರಾಯಚೂರು: ಎರಡು ನದಿಗಳ ನಡುವೆ ಇರುವ ರಾಯಚೂರಿಗೆ ಶ್ರೀಮಂತವಾದ ಸಾಂಸ್ಕೃತಿಕ ಚರಿತ್ರೆ ಇದೆ ಎಂದು ನಗರಸಭೆ ಹಿರಿಯ ಸದಸ್ಯ ಜಯಣ್ಣ ಹೇಳಿದರು.

ನಗರದ ಕೇಂದ್ರ ಬಸ್ ನಿಲ್ದಾಣ ಹತ್ತಿರದ ಮಕ್ಕಾ ದರವಾಜದಲ್ಲಿ ನಗರಸಭೆ ಹಾಗೂ ಐತಿಹಾಸಿಕ ಕೋಟೆ ಅಧ್ಯಯನ ಸಮಿತಿಯಿಂದ ನಾಡ ಹಬ್ಬ-2022 ನಿಮಿತ್ತ ಮಂಗಳವಾರ ಏರ್ಪಡಿಸಿದ್ದ ದಸರಾ ಕವಿಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಈ ಮಣ್ಣಿನ ಸಾಹಿತ್ಯದಲ್ಲಿ ಗಟ್ಟಿತನವಿದೆ, ಕವಿಗಳು ತಮ್ಮ ಕವಿತೆಗಳನ್ನು ಉತ್ತಮವಾಗಿ ವಾಚಿಸಬೇಕು. ನಗರಸಭೆಯ ನೂತನ ಅಧ್ಯಕ್ಷರು ಎಲ್ಲ ಪೌರಕಾರ್ಮಿಕರಿಗೆ ಹೊಸ ಬಟ್ಟೆಗಳನ್ನು ಕೊಡುವುದರ ಮೂಲಕ ಈ ವರ್ಷ ವಿಶೇಷವಾಗಿ ನಾಡಹಬ್ಬ ಆಚರಿಸುತ್ತಿದ್ದಾರೆ. ಹಬ್ಬದ ನಿಮಿತ್ತ ಪೌರಕಾರ್ಮಿಕರಿಗೆಲ್ಲರಿಗೂ ಕ್ರೀಡೆಗಳನ್ನು ಆಯೋಜಿಸಿರುವುದು ಕೂಡಾ ವಿಶೇಷ ಎಂದರು.

ನಗರಸಭೆ ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ ಮಾತನಾಡಿ,‌ ನಗರದಲ್ಲಿ ಅನೇಕ ಸಮಸ್ಯೆಗಳಿವೆ,. ಪ್ರತಿಯೊಬ್ಬರೂ ತಮ್ಮತಮ್ಮ ಮನೆಯಿಂದಲೇ ಸ್ವಚ್ಛತೆ ಕಾಪಾಡುವುದನ್ನು ಆರಂಭಿಸಬೇಕು ಎಂದು ಹೇಳಿದರು.

ರಾಯಚೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ವೆಂಕಟೇಶ್ ಬೇವಿನಬೆಂಚಿ ಮಾತನಾಡಿ, ಕವಿ ಎಂದರೆ ಸಂಸ್ಕೃತಿಯ ರಕ್ಷಕ ಮತ್ತು ಸಮಾಜ ರಕ್ಷಕ. ಹಾಗಾಗಿ ಈ ದೇಶದಲ್ಲಿ ಕವಿಗಳಿಗೆ ಮಹತ್ವದ ಸ್ಥಾನವಿದೆ. ಯಾವ ದೇಶದಲ್ಲಿ ಬುದ್ಧಿವಂತರು, ಸೃಜನಶೀಲರು, ಲೇಖಕರು ಸಾಹಿತಿಗಳಿದ್ದಾರೆ ಆ ದೇಶ ಹೆಚ್ಚು ಸಾಂಸ್ಕೃತಿಕವಾಗಿ ಬೆಳೆಯುತ್ತದೆ. ಯಾವ ದೇಶದಲ್ಲಿ ಕವಿ ಮತ್ತು ಸಾಹಿತಿಗಳಿಗೆ ಬೆಲೆ ಇರುವುದಿಲ್ಲ ಆ ದೇಶ ಅವನತಿಗೆ ಹೊಂದುತ್ತದೆ. ಹಾಗಾಗಿ ಇಂದು ಕವಿಗಳು ಪ್ರೀತಿ ಮತ್ತು ಸ್ನೇಹವನ್ನು ಹಂಚುವ ಕಾರ್ಯ ಮಾಡಬೇಕು. ಹಾಗಿದ್ದಾಗ ಸಮಾಜದಲ್ಲಿ ಪ್ರೀತಿ ಮತ್ತು ವಿಶ್ವಾಸವನ್ನು ಬಿತ್ತಬಹುದು ಎಂದು ಹೇಳಿದರು.

ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮೀದೇವಿ ಶಾಸ್ತ್ರಿ ಮಾತನಾಡಿ, ಕವನಗಳು ಎಲ್ಲರನ್ನೂ ಕೈಬೀಸಿ ಕರೆಯುತ್ತವೆ. ಆದರೆ ಕೆಲವರನ್ನು ಮಾತ್ರ ಆರಿಸಿಕೊಳ್ಳುತ್ತವೆ. ಕವನ ಬರೆಯುವುದು ಸುಲಭದ ಮಾತಲ್ಲ ಕವಿತೆ ಬರೆಯುವುದು ತುಂಬಾ ಕಠಿಣದ ಕೆಲಸ. ಕಾವ್ಯಕ್ಕೆ ಸಾಂಸ್ಕೃತಿಕ ವಾತಾವರಣಬೇಕು ಹಾಗಿದ್ದಾಗ ಮಾತ್ರ ಕವಿಗಳು ಬೆಳೆಯುತ್ತಾರೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಲಲಿತಾ ಕಡಗೋಲ್ ಆಂಜನೇಯ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಡಾ. ಶಿವರಾಜ ಪಾಟೀಲ ಅವರು ಕವಿಗೋಷ್ಠಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಕವಿಗೋಷ್ಠಿಯಲ್ಲಿ ಅಯ್ಯಪ್ಪಯ್ಯ ಹುಡಾ, ಆಂಜನೇಯ ಜಾಲಿಬೆಂಚಿ ಭಾರತಿ ಕುಲಕರ್ಣಿ, ಶಿವರಾಜ ಆರಸ, ದೇವೇಂದ್ರ ಕಟ್ಟಿಮನಿ, ಲಕ್ಷ್ಮಿರೆಡ್ಡಿ ಹೊಸೂರು, ಬಶೀರ ಅಹ್ಮದ್ ಹೊಸಮನಿ, ಯಲ್ಲಪ್ಪ ಮರ್ಚೆಡ್, ಗಿರಿಯಪ್ಪ ದಿನ್ನಿ, ಆಂಜನೇಯ ಜಾಲಿಬೆಂಚಿ, ಡಾ.ವೆಂಕಟೇಶ ನವಲಿ, ಕೋಮಲ ಡಿ., ಈರಣ್ಣ ಬೆಂಗಾಲಿ, ನರಸಪ್ಪ ಗೋನವಾರ, ನರಸಿಂಹಲು ವಡವಾಟಿ, ರಾಮಣ್ಣ ಭೋಯೆರ್, ಡಾ.ಶಾಮ್ ಸುಂದರ್ ಪಠವಾರಿ, ಜಿ.ಶಿವಮೂರ್ತಿ, ಶರತ್ ಚಂದ್ರ ಕಳಸ ತಮ್ಮ ಕವನಗಳನ್ನು ವಾಚಿಸಿದರು.

ನೃತ್ಯ ಕಲಾವಿದೆ ದುರ್ದಾನಾ ತಾಜ್ ಇವರ ನಿರ್ದೇಶನದಲ್ಲಿ ರಾಕಿ ಡಾನ್ಸ್ ಮತ್ತು ಫಿಟ್‌ನೆಸ್ ಸ್ಟುಡಿಯೋ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

ನಗರಸಭೆ ಉಪಾಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಎಚ್.ಎಚ್.ಮ್ಯಾದರ್, ಇದ್ದರು. ಸಮಿತಿ ಅಧ್ಯಕ್ಷ ಕೆ. ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು.

ರೇಣುಕಾದೇವಿ ಪ್ರಾರ್ಥಿಸಿದರು. ಚುಕ್ಕೆಚಿತ್ರ ಕಲಾವಿದ ಎಚ್.ಎಚ್ ಮ್ಯಾದರ ಸ್ವಾಗತಿಸಿದರು. ಮಂಜುನಾಥ್ ಐಲಿ ನಿರೂಪಿಸಿದರು. ಕೋಟೆ ಅಧ್ಯಯನ ಸಮಿತಿಯ ಕಾರ್ಯದರ್ಶಿ ಸೈಯದ್ ಹಫೀಜುಲ್ಲಾ ವಂದಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆಯ ಸಿಬ್ಬಂದಿ ಶಕೀಲ್, ಹಾಗೂ ರಸೂಲ್, ಕೋಟೆ ಅಧ್ಯಯನ ಸಮಿತಿಯ ಪದಾಧಿಕಾರಿಗಳು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ನಗರದ ಸಾಹಿತಿಗಳು, ಕವಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT